ಮಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೊಟ್ಟ ಮೊದಲ ಬಾರಿ ಮಂಗಳೂರಿನಲ್ಲಿ ಏಪ್ರಿಲ್ 14 ಭಾನುವಾರ ಬಿಜೆಪಿ ಅಭ್ಯರ್ಥಿಗಳ ಪರ ರೋಡ್ ಶೋ ನಡೆಸಲಿದ್ದು, ನಗರಾದ್ಯಂತ ಭಾರಿ ಸಿದ್ಧತೆ ನಡೆಯುತ್ತಿದೆ.
ಮಂಗಳೂರು ನಗರದ ಲೇಡಿ ಹಿಲ್ ನಾರಾಯಣ ಗುರು ಸರ್ಕಲ್ನಿಂದ ರೋಡ್ ಶೋ ಆರಂಭವಾಗಿ ಸಾಯಿ ಬೀನ್, ಲಾಲ್ ಭಾಗ್, ಬಲ್ಲಾಳ್ ಬಾಗ್, ಬೆಸೆಂಟ್, ಪಿವಿಎಸ್, ನವ ಭಾರತ್ ಸಮೀಪದ ಮಂಜೇಶ್ವರ ಗೋವಿಂದ ಪೈ ಸರ್ಕಲ್ ಬಳಿ ಸಮಾಪನಗೊಳ್ಳಲಿದೆ.
ಪ್ರಧಾನಿ ಮೋದಿ ಅವರ ರೋಡ್ ಶೋ ಹಾದು ಹೋಗುವ ರಸ್ತೆಯನ್ನು ಸಂಪೂರ್ಣ ಸ್ವಚ್ಛಗೊಳಿಸಲಾಗುತ್ತಿದೆ. ಡಿವೈಡರ್ ಮಧ್ಯ ಭಾಗದಲ್ಲಿ ಎಲ್ಇಡಿ ಲೈಟ್ , ರಸ್ತೆಯುದ್ದಕ್ಕೂ ಎಲೋಜನ್ ಲೈಟ್ ಅಳವಡಿಸಲಾಗುತ್ತಿದೆ. ರಸ್ತೆಯ ಇಕ್ಕೆಲಗಳಲ್ಲಿ ಬ್ಯಾರಿಕೇಡ್ ಹಾಗೂ ಡಿವೈಡರ್ ಬಳಿಯೂ ಬ್ಯಾರಿಕೇಡ್ ಹಾಕಲಾಗಿದೆ. ನಾರಾಯಣ ಗುರು ಸರ್ಕಲ್ನಿಂದ ನವ ಭಾರತ್ವರೆಗೆ ದ್ವಿಪಥ ರಸ್ತೆಯ ಬಲ ಭಾಗದಲ್ಲಿ ಮೋದಿ ಅವರ ರೋಡ್ ಶೋ ಸಾಗಲಿದೆ. ರಸ್ತೆಯ ಮಧ್ಯ ಭಾಗದಲ್ಲಿ ಡಿವೈಡರ್ ಹಾಕಲಾಗಿದ್ದು, ಅದರ ಮಧ್ಯೆ ಬಿಗಿ ಪೊಲೀಸ್ ಭದ್ರತೆ ಹಾಕಲಾಗುವುದು. ಇದರ ಹಿಮ್ಮುಖವಿರುವ ಇನ್ನೊಂದು ಮಗ್ಗುಲಿನ ರಸ್ತೆಯಲ್ಲಿ ಕಾರ್ಯಕರ್ತರು, ಮೋದಿ ಅಭಿಮಾನಿಗಳಿಗೆ ನಿಲ್ಲಲು ಅವಕಾಶ ಕಲ್ಪಿಸಲಾಗಿದೆ.
ರೋಡ್ ಶೋ ಪ್ಲ್ಯಾನ್ ಹೀಗಿದೆ: ಸಂಜೆ 6 ಗಂಟೆಗೆ ಪ್ರಧಾನಿ ಮೋದಿ ಅವರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೊಟ್ಟಾರ ಮೂಲಕ ನಾರಾಯಣ ಗುರು ವೃತ್ತಕ್ಕೆ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ತುಳುನಾಡ ಸಂಪ್ರದಾಯದ ಪ್ರಕಾರ ಆರತಿ ಬೆಳಗಿ ಭವ್ಯ ಸ್ವಾಗತ ನೀಡಲಾಗುವುದು. ಇದಾದ ನಂತರ ನಾರಾಯಣ ಗುರುಗಳ ಪ್ರತಿಮೆಗೆ ಪ್ರಧಾನಿ ಮೋದಿ ಮಾಲಾರ್ಪಣೆ ಮಾಡಲಿದ್ದಾರೆ. ಬಳಿಕ ತೆರೆದ ವಾಹನದಲ್ಲಿ ರೋಡ್ ಶೋ ಮೆರವಣಿಗೆ ಹೊರಡಲಿದ್ದಾರೆ.
ಲಕ್ಷಾಂತರ ಜನರ ಆಗಮನ ನಿರೀಕ್ಷೆ: ಪ್ರಧಾನಿ ಮೋದಿ ಅವರ ರೋಡ್ ಶೋ ಕಾರ್ಯಕ್ರಮಕ್ಕೆ ಲಕ್ಷಾಂತರ ಮಂದಿ ಸೇರುವ ನಿರೀಕ್ಷೆಯಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಪ್ರಯತ್ನಗಳನ್ನು ಮಾಡಲಾಗಿದೆ.
ತುಳುನಾಡ ವೈಭವ ಅನಾವರಣ: ತುಳುನಾಡು ಜಾನಪದ ಕಲೆ, ಸಂಸ್ಕೃತಿಯ ನಾಡು. ಈ ಹಿನ್ನೆಲೆಯಲ್ಲಿ ಕಂಬಳದ ಕೋಣಗಳು, ಹುಲಿ ವೇಷ ಕುಣಿತ, ಯಕ್ಷಗಾನ, ಡೊಳ್ಳು ಕುಣಿತ, ಚೆಂಡೆ, ಕಂಗೀಲು, ಶಿಲ್ಪ ಕಲಾ ಗೊಂಬೆ, ಭರತ ನಾಟ್ಯ ಸೇರಿದಂತೆ 15ಕ್ಕೂ ಅಧಿಕ ಕಲಾ ತಂಡಗಳಿಗೆ ಪ್ರತ್ಯೇಕ ಪ್ಲಾಟ್ ಫಾರಂ ಹಾಕಿ ಪ್ರದರ್ಶನ ನೀಡಲು ವ್ಯವಸ್ಥೆ ಮಾಡಲಾಗಿದೆ.
ನಾರಿ ಶಕ್ತಿಯನ್ನು ನೆನಪಿಸುವ ನವ ದುರ್ಗೆ
ಮೋದಿ ಅವರು ಅಪಾರ ದೈವ – ದೇವರ ಭಕ್ತರು. ನವರಾತ್ರಿ ಸಂದರ್ಭ 9 ದಿನವೂ ಉಪವಾಸಗೈದು ವ್ರತಾಚರಣೆ ಆಚರಿಸುವವರು. ಈ ಹಿನ್ನೆಲೆಯಲ್ಲಿ ನಾರಾಯಣ ಗುರು ಸರ್ಕಲ್ ಸಮೀಪ 9 ಮಂದಿ ಯುವತಿಯರು ನವ ದುರ್ಗೆಯರ ವೇಷ ಧರಿಸಿ ಶೋಭಿಸಲಿದ್ದಾರೆ.