ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಬಂಧಿತರಾಗಿದ್ದಾರೆ. ಈ ಪ್ರಕರಣದಲ್ಲಿ ಎ1 ಆರೋಪಿ ಪವಿತ್ರಾ ಗೌಡ ಆಗಿದ್ದಾರೆ.
ಈ ಪ್ರಕರಣ ಇಡೀ ದೇಶಾದ್ಯಂತ ಸದ್ದು ಮಾಡುತ್ತಿದೆ. ಪತಿ ಬಂಧನದ ಬೆನ್ನಲ್ಲೇ ತಮ್ಮ ಸೋಶಿಯಲ್ ಮೀಡಿಯಾ ಖಾತೆ ನಿಷ್ಕ್ರಿಯಗೊಳಿಸಿದ್ದ ವಿಜಯಲಕ್ಷ್ಮಿ ದರ್ಶನ್ ಮತ್ತೆ ಖಾತೆ ತೆರೆದಿದ್ದಾರೆ. ಇದೀಗ ಪೋಸ್ಟ್ ಒಂದನ್ನು ಹಾಕಿದ್ದಾರೆ.
ತಮ್ಮ ಕುಟುಂಬದ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದಾರೆ.
ಪೋಸ್ಟ್ ನಲ್ಲಿ ಏನಿದೆ?
ಮೊದಲಿಗೆ, ಶ್ರೀ ರೇಣುಕಾ ಸ್ವಾಮಿ ಅವರ ಕುಟುಂಬಸ್ಥರಿಗೆ ನಾನು ಹೃದಯಪೂರ್ವಕ ಸಾಂತ್ವನವನ್ನು ತಿಳಿಸಲು ಬಯಸುತ್ತೇನೆ. ಅವರ ಅಗಲಿಕೆಯನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಮನೆಯವರಿಗೆ ಕೊಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ನ್ಯಾಯಾಲಯದಿಂದ ತಡೆಯಾಜ್ಞೆಯೊಂದನ್ನು ತಂದಿರುವ ಅವರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಪೋಲಕಲ್ಪಿತ ಸುದ್ದಿ ಪ್ರಸಾರ ಮಾಡದಂತೆ ತಡೆಯಾಜ್ಞೆ ತಂದಿರುವ ಪ್ರತಿಯನ್ನು ಹಂಚಿಕೊಂಡಿದ್ದಾರೆ.
ಕಳೆದ ಕೆಲವು ದಿನಗಳಲ್ಲಿ, ದರ್ಶನ್ ಅವರು, ನಾನು, ನಮ್ಮ ಮಗ, ದರ್ಶನರ ಸೆಲೆಬ್ರಿಟೀಸ್ ಮತ್ತು ಕುಟುಂಬದವರು ಪದಗಳಲ್ಲಿ ವಿವರಿಸಲಾಗದ ನೋವನ್ನು ಅನುಭವಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಗೌರವಾನ್ವಿತ ನ್ಯಾಯಾಲಯದ ಮೇಲ್ಕಂಡ ಆದೇಶದಂತೆ, ಇನ್ನು ಮುಂದಾದರೂ ಅಸತ್ಯಗಳು ಹಾಗೂ ಅನಧಿಕೃತ ಮಾಹಿತಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗದಿರಲಿ ಎಂದು ಕೇಳಿಕೊಳ್ಳುತ್ತೇನೆ. ತಾಯಿ ಚಾಮುಂಡೇಶ್ವರಿ ಮತ್ತು ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ. ಸತ್ಯಮೇವ ಜಯತೆ ಎಂದು ವಿಜಯಲಕ್ಷ್ಮೀ ಹೇಳಿದ್ದಾರೆ.