ಕುಂದಾಪುರ: ಅನಿವಾಸಿ ಭಾರತೀಯ ಶಿರೂರಿನ ಮಣಿಗಾರ್ ಮೀರಾನ್ ಸಾಹೇಬ್ ಅವರ ಎಮ್.ಎಮ್.ಹೌಸ್ ವತಿಯಿಂದ ಶಿರೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ೫ ಲಕ್ಷ ರೂ ಆರೋಗ್ಯ ಸಲಕರಣೆಗಳನ್ನು ಜಿಲ್ಲಾಧಿಕಾರಿ ಜಿ.ಜಗದೀಶ್ ಅವರಿಗೆ ಹಸ್ತಾಂತರಿಸಿದರು.
ಶಿರೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಎಮ್.ಎಮ್.ಹೌಸ್ ವತಿಯಿಂದ ಕೊಡಮಾಡಿದ ಆರೋಗ್ಯ ಸಲಕರಣೆಗಳನ್ನು ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಗ್ರಾಮದ ಅಭಿವೃದ್ಧಿಗೆ ಇಲಾಖೆಗಳ ಜೊತೆಗೆ ಸಾರ್ವಜನಿಕ ಸಹಭಾಗಿತ್ವ ಅಗತ್ಯ. ಶಿರೂರು ಗ್ರಾಮೀಣ ಭಾಗದಲ್ಲಿ ಮಣಿಗಾರ್ ಮೀರಾನ್ ಸಾಹೇಬ್ ಅವರು ಅಪಾರ ಕೊಡುಗೆಯನ್ನು ನೀಡಿದ್ದಾರೆ. ಸದಾ ಸಮಾಜದ ಒಳಿತಿಗಾಗಿ ವಿಶೇಷ ಕೊಡುಗೆಗಳನ್ನು ನೀಡುತ್ತಿರುವ ಅವರಿಂದ ಇನ್ನಷ್ಟು ಜನ ಪ್ರೇರಿತರಾಗಿ ಸಮಾಜದ ಒಳಿತಿಗೆ ದುಡಿಯುವಂತಾಗಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ತಹಶೀಲ್ದಾರ್ ಶೋಭಾಲಕ್ಷ್ಮೀ, ಶಿರೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|ಸಹನಾ, ಶಿರೂರು ಗ್ರಾ.ಪಂ ಅಧ್ಯಕ್ಷೆ ದಿಲ್ ಶಾದ್, ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಶಿರೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಮಣಿಗಾರ್ ಮೀರಾನ್ ಸಾಹೇಬ್ ಅವರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿತ್ತು. ಅವರ ಅನುಪಸ್ಥಿತಿಯಲ್ಲಿ ಅವರ ತಮ್ಮ ಮಣಿಗಾರ್ ಮಹ್ಮದ್ ಜಿಪ್ರಿ ಸ್ವೀಕರಿಸಿದರು. ಹಾಗೂ ನಮ್ಮ ಕುಂದಾಪುರ ಬಳಗದ ಸಾಧತ್ ದಾಸ ಅವರಿಗೆ ಸನ್ಮಾನಿಸಲಾಯಿತು.