ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಇಂದು ನಮ್ಮಲ್ಲಿರುವ ಹಲವಾರು ಬ್ಯಾಂಕ್ಗಳಲ್ಲಿ ಭಾಷೆ ಬಾರದವರೇ ಹೆಚ್ಚಾಗಿ ಇರುತ್ತಾರೆ. ಆದರೆ ಸಹಕಾರಿ ಬ್ಯಾಂಕ್ಗಳಲ್ಲಿ ಹಾಗಿಲ್ಲ. ಭಾಷೆ ಬಲ್ಲವನಿಂದಲೇ ಗ್ರಾಮೀಣ ಭಾಗದ ಜನರಿಗೆ ಉತ್ತಮ ಸೇವೆ ನೀಡುತ್ತಿದ್ದೇವೆ. ನವೋದಯ ಸಂಘಗಳ ಮುಖಾಂತರವೇ ಇಂದು ಮಹಿಳೆಯರು ಮುಖ್ಯವಾಹಿನಿಗೆ ಬಂದಿದ್ದಾರೆ. ನಾವು ದೇವರ ಹೆಸರಲ್ಲಿ ಕೆಲಸ ಮಾಡುತ್ತಿಲ್ಲ. ಜನರ ಹೆಸರಲ್ಲೇ ಜನರಿಗೆ ಬದುಕುವ ಅವಕಾಶಗಳನ್ನು ಮಾಡಿಕೊಡುತ್ತಿದ್ದೇವೆ ಎಂದು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಡಾ|ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.
ಅವರು ಇಲ್ಲಿನ ತೆಕ್ಕಟ್ಟೆಯ ಜನಪ್ರಿಯ ಕಾಂಪ್ಲೆಕ್ಸ್ಗೆ ಸ್ಥಳಾಂತರಗೊಂಡ ಎಸ್ಸಿಡಿಸಿಸಿ ಬ್ಯಾಂಕ್ ತೆಕ್ಕಟ್ಟೆ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.
೨೦೦೫ರಲ್ಲಿ ೫೧ನೇ ಶಾಖೆಯಾಗಿ ತೆಕ್ಕಟ್ಟೆಯಲ್ಲಿ ಆರಂಭಗೊಂಡ ಈ ಶಾಖೆ ಇವತ್ತು ಯಶಸ್ವಿಯಾಗಿ ಮುನ್ನೆಡೆಯುತ್ತಿದೆ. ಸಹಕಾರ ಕ್ಷೇತ್ರದ ಮೇಲೆ ಜನರ ಅಭಿಮಾನ, ಗೌರವಕ್ಕೆ ತಕ್ಕಂತೆ ಉತ್ತಮ ಸೇವೆಯನ್ನು ಸಹಕಾರ ವ್ಯವಸ್ಥೆ ನೀಡುತ್ತಿದೆ. ಪ್ರತಿಯೊಬ್ಬರನ್ನು ಸ್ವಾವಲಂಬಿಗಳಾಗುವಂತೆ ಉತ್ತೇಜಿಸುವುದು ಸಹಕಾರ ಕ್ಷೇತ್ರದ ಕನಸು. ಸ್ವಾತಂತ್ರ್ಯೋತ್ಸವದ ೭೫ನೇ ವರ್ಷಾಚರಣೆಯ ಈ ಸಂದರ್ಭದಲ್ಲಿ ಸಹಕಾರ ಕ್ಷೇತ್ರ ಪ್ರತಿಯೊಬ್ಬ ಜನಸಾಮಾನ್ಯರ ಬಳಿಗೆ ತೆರಳುವ ಆಶಯವನ್ನು ಹೊಂದಿದೆ. ಇನ್ನೂ ಮುಂದೆ ಸ್ವ ಉದ್ಯೋಗ ಆರಂಭಿಸುವ ನವೋದಯ ಗುಂಪಿನ ಸದಸ್ಯರಿಗೆ ಮಿತಿಯಿಲ್ಲದೆ ಸಾಲ ನೀಡಲಾಗುವುದು. ಒಟ್ಟಾರೆಯಾಗಿ ಸ್ವಾವಲಂಬಿ ಜೀವನ, ಪ್ರತಿಯೊಬ್ಬರ ಆರ್ಥಿಕ ಸ್ಥಿತಿ ಸುಧಾರಣೆಯಾಗಬೇಕು ಎಂದರು.
ಸಹಕಾರ ಕ್ಷೇತ್ರದ ಮೂಲಕ ರೈತರಿಗೆ, ಜನಸಾಮಾನ್ಯರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಲಾಗುತ್ತಿದೆ. ರೈತರಿಗೆ ಸಿಗುವ ಶೂನ್ಯ ಬಡ್ಡಿದರದಲ್ಲಿ ೩ ಲಕ್ಷ ತನಕ ಸಾಲ ಪಡೆಯಲು ಪಡಿತರ ಚೀಟಿಯಲ್ಲಿನ ಹೆಸರುಗಳ ಗೊಂದಲವನ್ನು ಸರ್ಕಾರ ಪರಿಹರಿಸಿದೆ. ಆದಾಯ ತೆರಿಗೆ ಪಾವತಿಸುವವರು ನಿಬಡ್ಡಿ ಸಾಲವನ್ನು ಪಡೆಯಬಹುದಾಗಿದೆ. ಹಾಗಾಗಿ ಜನತೆ ಹೆಚ್ಚಿನ ಬಡ್ಡಿಗೆ ಸಾಲ ಪಡೆಯಬೇಡಿ. ಕಡಿಮೆ ಬಡ್ಡಿ ದರದಲ್ಲಿ ಸಹಕಾರ ಸಂಘಗಳಲ್ಲಿ ಸಾಲ ಸಿಗುತ್ತದೆ. ಅದನ್ನು ಸದುಪಯೋಗ ಪಡಿಸಿಕೊಂಡು ಸ್ವಾವಲಂಬಿಗಳಾಗಿ ಜೀವನ ನಡೆಸುವಂತಾಗಬೇಕು ಎಂದರು.
ಈ ಸಂದರ್ಭದಲ್ಲಿ ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಶರತ್ ಕುಮಾರ್ ಹೆಗ್ಡೆ, ಕಟ್ಟಡ ಮಾಲಕರಾದ ರಾಜು ಕೊಠಾರಿ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಮಲ್ಯಾಡಿ ಶಿವರಾಮ ಶೆಟ್ಟಿ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರುಗಳಾದ ಎಂ.ವಾದಿರಾಜ ಭಟ್, ಶಶಿಕುಮಾರ ರೈ, ಕೆ.ಹರಿಶ್ಚಂದ್ರ, ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು, ಬಿ.ಅಶೋಕ್ ಕುಮಾರ್ ಶೆಟ್ಟಿ, ತೆಕ್ಕಟ್ಟೆ ಶಾಖೆಯ ಶಾಖಾ ವ್ಯವಸ್ಥಾಪಕಿ ದುರ್ಗಾನಂದನ್ ಆರ್.ನಾಯ್ಕ, ಹಾಗೂ ಸಹಕಾರಿ ಸಂಘಗಳ ಅಧ್ಯಕ್ಷರು, ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಟ್ಟಡ ಮಾಲಕರಾದ ರಾಜು ಕೊಠಾರಿ ಅವರನ್ನು ಸನ್ಮಾನಿಸಲಾಯಿತು. ರಾಜು ಕೊಠಾರಿಯವರು ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ|ಎಂ.ಎನ್.ರಾಜೇಂದ್ರ ಕುಮಾರ್ ಅವರನ್ನು ಗೌರವಿಸಿದರು.
ಈ ವೇಳೆಯಲ್ಲಿ ಗೃಹಸಾಲ, ಹೈನುಗಾರಿಕಾ, ಕೃಷಿ ಸಾಲ, ವಾಹನ ಸಾಲದ ಸಾಲಪತ್ರ ವಿತರಿಸಲಾಯಿತು. ಚೈತನ್ಯ ವಿಮೆ ಪರಿಹಾರದ ಚೆಕ್ ವಿತರಿಸಲಾಯಿತು. ೧೦ ನೂತನ ನವೋದಯ ಸ್ವಸಹಾಯ ಗುಂಪುಗಳನ್ನು ಉದ್ಘಾಟಿಸಲಾಯಿತು. ಅತ್ಯಧಿಕ ಖಾತೆ ತೆರೆಯಲು ಶ್ರಮಿಸಿದ ಮಾಲತಿ ಅವರಿಗೆ ಪ್ರಥಮ ಬಹುಮಾನ ೮ ಗ್ರಾಂ ಚಿನ್ನ ನೀಡಲಾಯಿತು.
ಎಸ್ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಮ್.ಮಹೇಶ್ ಹೆಗ್ಡೆ ಸ್ವಾಗತಿಸಿ, ಎಸ್.ರಾಜು ಪೂಜಾರಿ ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.