ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಲಾಕ್ ಡೌನ್ ಹಿನ್ನೆಲೆಯಲ್ಲಿ 2 ವರ್ಷದಿಂದ ಶಿಕ್ಷಣ ಕ್ಷೇತ್ರದ ಸರಕಾರಿ ಮತ್ತು ಅನುದಾನಿತ ಖಾಸಗಿ ಶಾಲೆಗಳು ಕಾಲೇಜುಗಳು ಮುಚ್ಚಿದೆ. ಮಕ್ಕಳ ಶೈಕ್ಷಣಿಕ ಸಾಧನೆಗೆ ಬಾರೀ ಕೆಟ್ಟ ಪರಿಣಾಮ ಬಿದ್ದರೆ ಇಲ್ಲೊಂದು ಕಡೆಯಲ್ಲಿ ಇಲಾಖೆಯ ಶಿಫಾರಸ್ಸಿನ ಮೇಲೆ ಪ್ರತೀ ದಿನ ಮಕ್ಕಳಿಗೆ ತರಗತಿ ನಡೆಯುತ್ತಿದೆ. ಹೌದು, ಇದು ತೀರಾ ಹಿಂದುಳಿದ ಮತ್ತು ಮೂಲ ಸೌಖರ್ಯ ವಂಚಿತ ಸ್ಥಳವಾದ ಬ್ರಹ್ಮಾವರ ಮಟಪಾಡಿ ಬಲ್ಜಿಯ ಕೊರಗ ಕಾಲೋನಿಯಲ್ಲಿ 50 ವರ್ಷದಿಂದ ಇಲ್ಲಿ ಶಾಲೆ ಮತ್ತು ಶಿಕ್ಷಣವನ್ನು ಕಾಣದ ಕರಾವಳಿಯ ಮೂಲ ನಿವಾಸಿಗಳು ಎನ್ನಲಾದ ಕೊರಗರ 11 ಮನೆಗಳಿದೆ. ತೀರಾ ಇತ್ತೀಚೆಗೆ ಇಲ್ಲಿ ಹುಭಾಶಿಕಾ ಕೊರಗ ಯುವ ಕಲಾ ವೇದಿಕೆ ಬಾರಕೂರು ಇದರ ಸಂಘಟನೆಯ ಪ್ರಭಾವದಿಂದ ಇಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಕೊರಗರ ಭಾಷೆ, ಶಿಕ್ಷಣ, ಆರೋಗ್ಯ, ಕಲೆ, ಸಂಸ್ಕøತಿ, ಮತ್ತು ಸಂಘಟನೆ ಮಹತ್ವ ನೀಡಿದ ಕಾರಣ. ಇಲ್ಲಿನ ಜನರಿಗೆ ವಾಸಕ್ಕೆ ಮನೆ ಹಕ್ಕು ಪತ್ರ, ಕುಡಿಯುವ ನೀರು ಸಿಕ್ಕಿದೆ. ಶಿಕ್ಷಣದಿಂದ ದೂರ ಇದ್ದ ಇಲ್ಲಿನ ಯುವಕರು ಇದೀಗ ಪದವಿ ಶಿಕ್ಷಣ ಪಡೆಯುವ ಮಟ್ಟಕ್ಕೆ ಬಂದಿದ್ದಾರೆ.
ಇಲ್ಲಿನ ಕೊರಗ ಮಕ್ಕಳ ಶಿಕ್ಷಣ ಸಾಧನೆಗೆ 4 ವರ್ಷದಿಂದ ಅವರದೇ ಸಂಘಟನೆ ಇಲ್ಲಿ ಹತ್ತಿರದ ಅಂಗನವಾಡಿ ತರಗತಿ ಮುಗಿದ ಬಳಿಕ ಪ್ರತೀ ದಿನ ಸಂಜೆ 6 ಗಂಟೆ ತನಕ ಶಿಕ್ಷಕಿಯೊಬ್ಬರನ್ನು ನೇಮಿಸಿ ತರಗತಿಯನ್ನು ಮಾಡಿ ಅವರ ಶಿಕ್ಷಣ ಮಟ್ಟವನ್ನು ಹೆಚ್ಚಿಸುತ್ತಿದೆ. 5 ನೇ ತರಗತಿಯಿಂದ ಪದವೀ ಶಿಕ್ಷಣ ಪಡೆಯುವ 11 ಕೊರಗ ಮಕ್ಕಳು ಇಲ್ಲಿ ಶಾಲಾ ಶಿಕ್ಷಣದೊಂದಿಗೆ ಅವರದೇ ಬದುಕಿನ ಶಿಕ್ಷಣ ಪಡೆಯುತ್ತಾರೆ. ಕಾಲೋನಿಯ ಒಂದು ಭಾಗದಲ್ಲಿ ಸರಕಾರದಿಂದ ದೊರೆತ 6 ಸೆನ್ಸ್ ಜಾಗದಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಕೊರಗ ಸಮುದಾಯ ಭವನ ನಿರ್ಮಾಣವಾಗುತ್ತಿದೆ.
ಮುಂದಿನ ದಿನದಲ್ಲಿ ಇವರ ಪ್ರತಿಯೊಂದು ಚಟುವಟಿಕೆ ಅಲ್ಲಿ ನಡೆಯಲಿದ್ದು, ಕೆಲವು ಸಮಯದ ಹಿಂದೆ ತೀರಾ ಹಿಂದುಳಿದ ಕಾಲೋನಿಯ ಮಕ್ಕಳು ಶೈಕ್ಷಣಿಕ ಸಾಧನೆಯ ಜೊತೆ ಅನೇಕ ಬದಲಾವಣೆ ಕಂಡಿದ್ದಾರೆ.