ಉಡುಪಿ: ತಮ್ಮ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಇಲ್ಲದೇ ಅಧಿಕಾರ ನಿಭಾಯಿಸಿದ ಆಸ್ಕರ್ ಅವರ ಮೇಲೆ ಯಾರಿಗೂ ಆರೋಪ ಹೊರಿಸಲು ಸಾಧ್ಯವಾಗಿಲ್ಲ. ಅಷ್ಟರಮಟ್ಟಿಗೆ ಪಾರದರ್ಶಕವಾಗಿ ತಮಗೆ ಸಿಕ್ಕ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯಕ್ಕೆ ರಾಜಕೀಯ ಕೊಂಡಿಯಂತಿದ್ದ ಆಸ್ಕರ್ ನಿಧನ ಇಡೀ ರಾಷ್ಟ್ರ ರಾಜಕಾರಣಕ್ಕೆ ಬಹುದೊಡ್ಡ ನಷ್ಟ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಅವರು ಮಂಗಳವಾರ ಕಾಂಗ್ರೇಸ್ ಭವನದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫೆರ್ನಾಂಡೀಸ್ ಅವರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ಮಾತನಾಡಿದರು.
ಆಸ್ಕರ್ ಅವರು ಪಕ್ಷದಲ್ಲಿ ವಿವಿಧ ಜವಾಬ್ದಾರಿಗಳನ್ನು ಸ್ವೀಕರಿಸಿ ದೇಶದ ಉದ್ದಗಲಕ್ಕೂ ಪ್ರವಾಸ ಮಾಡಿ ಯುವಕರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ವರ್ಗದ ಜನರಿಗೂ ಹೊಸ ರೂಪವನ್ನು ಕೊಟ್ಟಂತಹ ಮಹಾನ್ ನಾಯಕರಾಗಿದ್ದಾರೆ. ರಾಜಕೀಯ ಜೀವನದಲ್ಲಿ ನನಗೂ ಆಸ್ಕರ್ ಫೆರ್ನಾಂಡಿಸ್ ಅವರಿಗೂ ಸುಮಾರು 42 ವರ್ಷಗಳ ನಂಟಿದೆ. ಅವರು ವಿದ್ಯಾರ್ಥಿ ಘಟಕದ ನ್ಯಾಶನಲ್ ಕೌನ್ಸಿಲ್ ಸದಸ್ಯರಾಗಿದ್ದ ಕಾಲದದಿಂದಲೂ ನಾನು ಅವರ ಜೊತೆಗೆ ಒಡನಾಟ ಹೊಂದಿದ್ದೆ. ಅವರ ಭೇಟಿಗಾಗಿ ಆಗಾಗೆ ಉಡುಪಿಗೆ ಬರುತ್ತಿದ್ದೆ. ಇಡೀ ದೇಶದ ಉದ್ದಗಲಕ್ಕೂ ಅಜಾತಶತ್ರುವಾಗಿ, ಓರ್ವ ಸರಳ-ಸಜ್ಜನಿಕೆಯ ನಾಯಕನಾಗಿ, ಯಾರ ಮನಸ್ಸು ನೋಯಿಸದೆ ಪಕ್ಷದಲ್ಲಿ ಪ್ರಾಮಾಣಿಕ ನಾಯಕನಾಗಿ ಗುರುತಿಸಿಕೊಂಡಿದ್ದರು ಎಂದು ಆಸ್ಕರ್ ಅವರನ್ನು ಸ್ಮರಿಸಿದರು.