ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಸಮಾಜದಲ್ಲಿ ಜನತೆಗೆ ವಿನೂತನ ಸೇವೆ ಒದಗಿಸುವ ವಿಭಿನ್ನ ಯೋಚನೆ ಯೋಜನೆಯ ಮೂಲಕ ೯ ವರ್ಷದ ಹಿಂದೆ ಸಮಾನ ಮನಸ್ಕರು ಸ್ಥಾಪಿಸಿದ ಕುಚ್ಚೂರು ಕುಡಿಬೈಲು ಶಾಂತಿನಿಕೇತನ ಯುವ ವೃಂದವು ಕಳೆದ ವರ್ಷ ಸ್ಥಾಪಿಸಿದ ಶಾಂತಿನಿಕೇತನ ಸೌಹಾರ್ದ ಸಹಕಾರಿ ನಿಯಮಿತವು ಇದೀಗ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದು ಸಂಭ್ರಮದ ಸವಿನೆನಪಿಗಾಗಿ ಬೇಳಂಜೆಯಲ್ಲಿ ಶಾಂತಿನಿಕೇತನ ಸೇವಾ ಕೇಂದ್ರ ಮತ್ತು ಶಾಂತಿನಿಕೇತನ ಆಟೋ ಸೇವೆಯನ್ನು ಗ್ರಾಮೀಣ ಜನತೆಯ ಸೇವೆಗಾಗಿ ಆರಂಭಿಸಲಾಗುತ್ತದೆ, ಇದೇ ೨೦ ರಂದು ನೂತನ ಸೇವೆ ಆರಂಭಗೊಳ್ಳಲಿದೆ ಎಂದು ಕುಚ್ಚೂರು ಕುಡಿಬೈಲು ಶಾಂತಿನಿಕೇತನ ಯುವ ವೃಂದ ಮತ್ತು ಶಾಂತಿನಿಕೇತನ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಕುಡಿಬೈಲ್ ರಾಜೇಶ್ ತಿಳಿಸಿದರು.
ಅವರು ಮಂಗಳವಾರ ಹೆಬ್ರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಅತ್ಯಂತ ಗ್ರಾಮೀಣ ಪ್ರದೇಶದಲ್ಲಿ ಯಶಸ್ವಿ ಯುವಕರಾದ ನಾವು ಸ್ಥಾಪಿಸಿದ ಶಾಂತಿನಿಕೇತನ ಸೌಹಾರ್ದ ಸಹಕಾರಿ ನಿಯಮಿತವು ಅತೀ ಕಡಿಮೆ ಅವಧಿಯಲ್ಲಿ ಎಲ್ಲಾ ವಿಧದ ೧೦೨೩ ಗ್ರಾಹಕರನ್ನು ಹೊಂದಿದ್ದು ಅತ್ಯುತ್ತಮ ವ್ಯವಹಾರ ನಡೆಸಿ ೧೦೦ ಶೇಕಡ ಸಾಲ ವಸೂಲಾತಿಯನ್ನು ಮಾಡಿದೆ. ೧.೫೦ ಕೋಟಿ ರೂಪಾಯಿ ಬಂಡವಾಳ ಹೊಂದಿದೆ. ಜನತೆಗೆ ಇನ್ನಷ್ಟು ಜನಪರವಾದ ಸೇವೆಯನ್ನು ಗ್ರಾಮೀಣ ಪ್ರದೇಶದ ಜನತೆಗೆ ಪರಿಣಾಮಕಾರಿಯಾಗಿ ನೀಡಬೇಕು ಎನ್ನುವುದೇ ನಮ್ಮ ಮುಖ್ಯ ಉದ್ದೇಶ ಎಂದು ಕುಡಿಬೈಲ್ ರಾಜೇಶ್ ಹೇಳಿದರು.
೨೪ ಸದಸ್ಯರಿಂದ ಬಡವರ ಸೇವೆ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ಅಂದು ಸ್ಥಾಪಿಸಿದ ಕುಚ್ಚೂರು ಕುಡಿಬೈಲು ಶಾಂತಿನಿಕೇತನ ಯುವ ವೃಂದ ರಾಜ್ಯದಾದ್ಯಂತ ಇಂದು ೬೦೦ ಸದಸ್ಯರನ್ನು ಹೊಂದಿ ಶಾಂತಿನಿಕೇತನ ನಲಿ ಕಲಿ ಯೋಜನೆಯನ್ನು ರೂಪಿಸಿ ಎಲ್ಲರ ಮನೆ ಮಾತಾಗಿದೆ.
ಹಡಿಲು ಭೂಮಿ ಕೃಷಿ ಯೋಜನೆ, ಮಕ್ಕಳಿಗೆ ಕ್ರೀಡೆ, ಪಠ್ಯ, ಪಠ್ಯೇತರ ಚಟುವಟಿಕೆ, ಭಜನೆ, ಜ್ಞಾನಸ್ಪೂರ್ತಿ ರಸಪ್ರಶ್ನೆ ಕಾರ್ಯಕ್ರಮ, ಒಂದೇ ಸೂರಿನಡಿ ಎಲ್ಲಾ ಸೇವೆ ನೀಡುವ ಶಾಂತಿ ನಿಕೇತನ ಸೇವಾ ಕೇಂದ್ರ, ೧೦೦ ಜನರಿಂದ ನೇತ್ರದಾನ, ನಿರಂತರ ಸ್ವಚ್ಚತಾ ಕಾರ್ಯಕ್ರಮ, ಬಸ್ ನಿಲ್ದಾಣಗಳಿಗೆ ಸುಣ್ಣ ಬಣ್ಣ ಮತ್ತು ಪರಿಸರದ ಸ್ವಚ್ಚತಾ ಕಾರ್ಯವನ್ನು ಮಾಡುತ್ತ ಬಂದಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಸಹಾಯ ಮಾಡಲು ವಿದ್ಯಾ ಪೋಷಕ್, ರಾಜ್ಯದ ವಿವಿದೆಡೆ ಶಾಂತಿ ನಿಕೇತನ ಯುವ ವೃಂದದ ಘಟಕಗಳನ್ನು ಸ್ಥಾಪಿಸಲಾಗಿದೆ. ಹೀಗೆ ಹಳ್ಳಿಹಳ್ಳಿಗಳಲ್ಲಿ ಸಾಮಾಜಕ ಶೈಕ್ಷಣಿಕ ಧಾರ್ಮಿಕ ಕೃಷಿ ಕ್ರೀಡೆ ಸಹಿತ ಹಲವು ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಮೂಲಕ ಜನರ ಸೇವೆಯನ್ನು ಮಾಡುತ್ತ ಬಂದಿದೆ. ನಮ್ಮ ಸೇವೆಯನ್ನು ಪರಿಗಣಿಸಿ ಬಸವರತ್ನ ರಾಷ್ಟ್ರ ಪ್ರಶಸ್ತಿ, ಭಾರತ ಗೌರವ ಪ್ರಶಸ್ತಿ, ಕೃಷ್ಣಾನುಗೃಹ ಪ್ರಶಸ್ತಿ, ಕರ್ನಾಟಕ ರತ್ನಶ್ರೀ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಶಾಂತಿನಿಕೇತನಕ್ಕೆ ಸಂದಿದೆ ಎಂದು ಕುಡಿಬೈಲ್ ರಾಜೇಶ್ ತಿಳಿಸಿದರು.
ಸುದ್ದಿ ಗೋಷ್ಠಿಯಲ್ಲಿ ಶಾಂತಿನಿಕೇತನ ಸೌಹಾರ್ದ ಸಹಕಾರಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನರೇಂದ್ರ. ಎಸ್, ಉಪಾಧ್ಯಕ್ಷ ರವೀಶ್ ಶೆಟ್ಟಿ, ನಿರ್ದೇಶಕ ಸಂದೇಶ ಕುಲಾಲ್ ಉಪಸ್ಥಿತರಿದ್ದರು.