ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ಸರಕಾರದ ಮಹತ್ವಕಾಂಕ್ಷಿ ಯೋಜನೆಯ ಕಾಮಗಾರಿಯಿಂದ ಸ್ಥಳೀಯ ನಿವಾಸಿಗಳಿಗೆ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಶಾಸಕರು ಮಧ್ಯೆ ಪ್ರವೇಶಿಸುವಂತೆ ಆಗ್ರಹಿಸಿ ಮಂಗಳವಾರ ಸಂಜೆ ಗುಲ್ವಾಡಿ ಏತ ನೀರಾವರಿ ಕಾಮಗಾರಿ ನಡೆಯುವ ಸ್ಥಳದಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್ ವಾದಿ) ಬೈಂದೂರು ವಲಯ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಈ ಸಂದರ್ಭ ವಲಯ ಸಮಿತಿ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ಕಾಮಗಾರಿಯಿಂದ ಹಾನಿಗೊಳಗಾದ ಕುಡಿಯುವ ನೀರಿನ ಬಾವಿ ದುರಸ್ತಿಗೊಂಡಿಲ್ಲ. ಚರಂಡಿಯೊಳಗೆ ಅಳವಡಿಸಿದ ಬೃಹದಾಕಾರದ ವಿದ್ಯುತ್ ಕಂಬಗಳಿಂದ ಗುಲ್ವಾಡಿಯ ಗ್ರಾಮ ಭವಿಷ್ಯದಲ್ಲಿ ಅಭಿವೃದ್ಧಿಗೆ ತೊಡಕಾಗಲಿದೆ. ಈ ಬಗ್ಗೆ ಶಾಸಕರು ಲೋಕೊಪಯೋಗಿ ಇಲಾಖೆ ಜತೆ ಮಾತುಕತೆ ನಡೆಸಿ ರಸ್ತೆ ಅಗಲಿಕರಣಕ್ಕೆ ತೊಡಕಾಗದಂತೆ ಕ್ರಮವಹಿಸಬೇಕು. ಸೌಪರ್ಣಿಕ ನದಿ ತೀರದಿಂದ ಖಾಸಗಿ ಜಾಗದವರನ್ನು ಮನವೊಲಿಸಿ ವಿದ್ಯುತ್ ಕಂಬಗಳನ್ನು ಅಳವಡಿಸಲು ಬೈಂದೂರು ಶಾಸಕರು ಕಾಳಜಿ ವಹಿಸಿದರೆ ಗುಲ್ವಾಡಿ ಅಭಿವೃದ್ಧಿಗೆ ಸಹಾಯಕವಾಗಲಿದೆ ಎಂದರು.

ಜಿಲ್ಲಾ ಸಮಿತಿ ಸದಸ್ಯ ಎಚ್ ನರಸಿಂಹ ಮಾತನಾಡಿ, ಏತ ನೀರಾವರಿ ಯೋಜನೆಯಿಂದ ಗುಲ್ವಾಡಿಯ ಸುತ್ತಮುತ್ತಲ ಗ್ರಾಮಗಳಿಗೆ ಬಹಳಷ್ಟು ಪ್ರಯೋಜನವಿದೆ ಆದರೆ ಸ್ಥಳೀಯ ಗ್ರಾಮ ಪಂಚಾಯತ್ ಆಡಳಿತ ಕಡೆಗಣಿಸಿ ಕಾಮಗಾರಿ ನಡೆಸಲಾಗುತ್ತಿದೆ. ಸ್ಥಳೀಯಾಡಳಿತ ಹಾಗು ಜನರಿಗೆ ಯಾವುದೇ ಮಾಹಿತಿ ನೀಡದೇ ಕಾಮಗಾರಿ ನಡೆಸಲಾಗುತ್ತಿದೆ. ಇದರಿಂದ ಸ್ಥಳೀಯ ಜನರು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಸಮಸ್ಯೆ ಬಗೆಹರಿಸಲು ಸಂಬಂದಪಟ್ಟವರು ಮುಂದಾಗಬೇಕು ಎಂದರು.

ಸ್ಥಳೀಯ ಮುಖಂಡ ಜಿ.ಡಿ ಪಂಜು ಪೂಜಾರಿ ಮಾತನಾಡಿ, ಕಾಮಗಾರಿಯಿಂದ ಕೃಷಿ ಚಟುವಟಿಕೆಗಳಿಗೆ ಆಗುತ್ತಿರುವ ಹಾನಿ ತಪ್ಪಿಸಬೇಕು. ಹಾನಿಯಾದರೆ ಪರಿಹಾರ ನೀಡಬೇಕು. ಬಡಕಾರ್ಮಿಕರ ಮಕ್ಕಳು ಓದುತ್ತಿರುವ ಗುಲ್ವಾಡಿ ಹಾಗು ಮಾವಿನಕಟ್ಟೆ ಸರಕಾರಿ ಶಾಲೆಯ ಅಭಿವೃದ್ಧಿಗೆ ಸಹಕರಿಸಬೇಕು ಎಂದ ಅವರು, ಸ್ಥಳೀಯರಿಗೆ ಮಾಹಿತಿ ನೀಡದೇ ಕಾಮಗಾರಿ ನಡೆಸುತ್ತಿದ್ದು ಶಾಸಕರು ಜನರ ಪರವಾಗಿ ಮಾತಾಡುತ್ತಿಲ್ಲ. ಸಮಸ್ಯೆ ಮುಂದುವರಿದರೆ ಊರ ಜನರೊಂದಿಗೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದರು.
ಪ್ರತಿಭಟನೆ ಬಳಿಕ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರಸನ್ನ ಅವರಿಗೆ ಮನವಿ ನೀಡಲಾಯಿತು.
ಪ್ರತಿಭಟನೆಯಲ್ಲಿ ಜಿಲ್ಲಾ ಸಮಿತಿ ಸದಸ್ಯ ವೆಂಕಟೇಶ ಕೋಣಿ, ಸ್ಥಳೀಯ ಮುಖಂಡರಾದ ಜಿ.ಬಿ ಮಹಮ್ಮದ್, ಜಮಾಲ್ ಗುಲ್ವಾಡಿ, ಗ್ರಾಮಪಂಚಾಯತ್ ಸದಸ್ಯ ಹಂಝ, ಅಣ್ಣಪ್ಪ ಅಬ್ಬಿಗುಡ್ಡಿ, ನಾಗರಾಜ, ನೀಲಾ ಮೊದಲಾದವರು ಭಾಗವಹಿಸಿದ್ದರು.

