ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಬಾರಕೂರು ಧರ್ಮಶಾಲೆ ಶ್ರೀ ಮಾಸ್ತಿ ಅಮ್ಮನವರ ದೇವಸ್ಥಾನದಲ್ಲಿ ಶ್ರೀ ಮಾಸ್ತಿದುರ್ಗಾ ಚಿಣ್ಣರ ಬಳಗದ ಮಕ್ಕಳಿಗೆ ಅರ್ಚಕರು ಕೊಡಮಾಡವ 15 ನೇ ವರ್ಷದ ಪುಸ್ತಕ ಹಾಗೂ ಕಲಿಕೋಪಕರಣಗಳ ವಿತರಣೆ ಮಾಡಲಾಯಿತು. ಈ ಸಂದರ್ಭ ಉಡುಪಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಗೌರಿ ವಿಶ್ವನಾಥ್ ಪೂಜಾರಿ ಮಾತನಾಡಿ, ವಿಶ್ವದಲ್ಲಿ ಭಾರತೀಯ ಸಂಸ್ಕೃತಿ ಶ್ರೇಷ್ಠವೂ ಜ್ಯೇಷ್ಠವೂ ಆಗಿದೆ. ಮಕ್ಕಳಲ್ಲಿ ಸಂಸ್ಕಾರ ಬೆಳೆಸಿದಲ್ಲಿ ಭಾರತೀಯ ಸಂಸ್ಕೃತಿ ಎಂದೂ ನಾಶವಾಗದು. ಪ್ರತಿದಿನ ಮಕ್ಕಳು ಮನೆಯವರೊಂದಿಗೆ ಕೂಡಿಕೊಂಡು ಭಜನೆ ಮಾಡಿದ್ದಲ್ಲಿ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಮಾಸ್ತಿದುರ್ಗಾ ಚಿಣ್ಣರ ಮಹಿಳಾ ಭಜನಾ ಬಳಗದ ಅಧ್ಯಕ್ಷೆ ವಿಶಾಲ ಮಹೇಶ್ ಮಾತನಾಡಿ, ಸುಂದರ ಪರಿಸರದ ದೇವಸ್ಥಾನಗಳಲ್ಲಿ ಭಜನೆ, ಧ್ಯಾನ ಇವೇ ಮೊದಲಾದವುಗಳನ್ನು ಮಾಡಿದಲ್ಲಿ ನಮಗೆ ಆರೋಗ್ಯ, ಜ್ಞಾನ ವೃದ್ಧಿಯಾಗಲು ಸಾಧ್ಯವಾಗುತ್ತದೆ. ಅದರಲ್ಲೂ ಮಕ್ಕಳು ಹಾಗೂ ಮಹಿಳೆಯರು ಇಂತಹ ಸತ್ಸಂಗದಲ್ಲಿ ಭಾಗವಹಿಸಿದಷ್ಟು ಮನೆ ಮತ್ತು ಮನ ಅಭಿವೃದ್ಧಿಯಾಗುತ್ತದೆ ಎಂದರು. ಇನ್ನೋರ್ವ ಅತಿಥಿ ಹನೆಹಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ. ಜಿ. ಗಾಣಿಗ ಶುಭ ಹಾರೈಸಿದರು.
ದೇವಸ್ಥಾನದ ಆಡಳಿತ ಸಮಿತಿಯ ಸುರೇಶ್ ಸುಭಾನು, ಹರ್ಷಿತ್ ರಾವ್, ಶ್ರೀ ಮಾಸ್ತಿದುರ್ಗಾ ಮಹಿಳಾ ಭಜನಾ ಬಳಗದ ಸದಸ್ಯೆಯರು, ಚಿಣ್ಣರ ಬಳಗದ ಮಕ್ಕಳ ರಕ್ಷಕರು ಉಪಸ್ಥಿತರಿದ್ದರು. ಚಿಣ್ಣರ ಬಳಗದ ಅಧ್ಯಕ್ಷ ಅನಂತಪದ್ಮನಾಭ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರ್ವಹಿಸಿದರು. ಚಿಣ್ಣರ ಬಳಗದ ನಿರ್ದೇಶಕ ರಾಘವೇಂದ್ರ ರಾವ್ ವಂದಿಸಿದರು.