ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಖಾಸಗಿ ಶಾಲೆಗಳಲ್ಲಿ ಕಲಿಯುತ್ತಿದ್ದ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು, ಖಾಸಗಿ ಶಾಲೆಯವರು ವರ್ಗಾವಣೆ ಪತ್ರ (ಟಿ ಸಿ) ನೀಡದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದ ಪೋಷಕರು ಮಂಗಳವಾರ ಕುಂದಾಪುರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಜಮಾಯಿಸಿ ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿ ಪ್ರತಿಭಟಿಸಿದರು.
ಕೊರೊನಾದಿಂದ ಬಸವಳಿದ ತಾವು ಖಾಸಗಿ ಶಾಲೆಗಳ ಶುಲ್ಕ ಕಟ್ಟಲು ತೊಂದರೆಯಾಗಿದೆ. ಈ ಕಾರಣದಿಂದ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಲು ಮುಂದಾಗಿದ್ದೇವೆ. ಆದರೆ ಖಾಸಗಿ ಶಾಲೆಯವರು ಮಕ್ಕಳ ವರ್ಗಾವಣೆ ಪತ್ರ ನೀಡದೆ ತೊಂದರೆ ಕೊಡುತ್ತಿದ್ದಾರೆ. ಶಾಲೆಯವರು ವರ್ಗಾವಣೆ ಪತ್ರ ನೀಡದಿದ್ದರೆ, ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ವರ್ಗಾವಣೆ ಪತ್ರ ಪಡೆದುಕೊಳ್ಳಬಹುದು ಎಂದು ಈಗಾಗಲೇ ಸರ್ಕಾರ ಹೇಳಿದೆ.
ಆದರೆ, ತಮಗೆ ಎಲ್ಲಿಂದಲೂ ವರ್ಗಾವಣೆ ಪತ್ರ ಸಿಗುತ್ತಿಲ್ಲ. ಇದರಿಂದ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ತೊಡಕಾಗಿದೆ. ಇದರಿಂದ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗುತ್ತಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಅಲ್ಲದೇ ನಾಳೆ ಕುಂದಾಪುರಕ್ಕೆ ಆಗಮಿಸಲಿರುವ ಶಿಕ್ಷಣ ಸಚಿವರಾದ ಬಿ. ಸಿ. ನಾಗೇಶ್ ಅವರಿಗೆ ಮನವಿ ಸಲ್ಲಿಸಲಿದ್ದೇವೆ ಎಂದಿದ್ದಾರೆ.
ವರ್ಗಾವಣೆ ಪತ್ರ ನೀಡುವುದು ಕಡ್ಡಾಯ : ಕ್ಷೇತ್ರ ಶಿಕ್ಷಣಾಧಿಕಾರಿ
ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಎಸ್. ಕೆ. ಪದ್ಮನಾಭ ಅವರು, ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯಿದೆಯನ್ವಯ ಮಗು ಇಷ್ಟಪಟ್ಟ ಶಾಲೆಯಲ್ಲಿ ಓದಬಹುದಾಗಿದೆ. ಮತ್ತು ಮಗು ಖಾಸಗಿ ಶಾಲೆಯಿಂದ ಸರ್ಕಾರಿ ಶಾಲೆಗೆ ಸೇರ ಬಯಸಿದರೆ, ಖಾಸಗಿ ಶಾಲೆಯವರು ಕಡ್ಡಾಯವಾಗಿ ಮಗುವಿಗೆ ವರ್ಗಾವಣೆ ಪತ್ರವನ್ನು ನೀಡಬೇಕು. ಆನ್ಲೈನ್ ನಲ್ಲೂ ನೀಡಬಹುದು. ಹಾಗೊಂದು ವೇಳೆ ವರ್ಗಾವಣೆ ಪತ್ರ ನೀಡದಿದ್ದರೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಿಂದಲೇ ಅದನ್ನು ಆನ್ಲೈನ್ ನಲ್ಲಿ ಪೋಷಕರು ಪಡೆದುಕೊಳ್ಳಬಹುದು. ಮಾತ್ರವಲ್ಲ, ವರ್ಗಾವಣೆ ಪತ್ರ ನೀಡಲು ಸತಾಯಿಸುವ ಶಾಲೆಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು. ಈಗಾಗಲೇ ಮೇಲಧಿಕಾರಿಗಳಿಗೆ ಈ ಬಗ್ಗೆ ಪತ್ರ ಬರೆಯಲಾಗಿದೆ. ಖಾಸಗಿ ಶಾಲೆಯವರಿಗೆ ನೋಟೀಸು ನೀಡಲಾಗಿದೆ ಎಂದರು.
ಆದರೆ, ಪ್ರತಿಭಟನಾ ನಿರತ ಪೋಷಕರು ಇದನ್ನು ಒಪ್ಪಲಿಲ್ಲ. ಅಧಿಕಾರಿಗಳೇ ಹೇಳುವಂತೆ, ಕೆಲವು ಖಾಸಗಿ ಶಾಲೆಯವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರಿಂದ ವರ್ಗಾವಣೆ ಪತ್ರವನ್ನು ಅಧಿಕಾರಿಗಳೂ ನೀಡುತ್ತಿಲ್ಲ. ತಮಗೆ ಸರ್ಕಾರದಿಂದ ಬರೆ ಸೂಚನೆ ಬಂದಿದೆಯೇ ವಿನಃ ಆದೇಶ ಬಂದಿಲ್ಲ ಎಂದು ಅಸಹಾಯಕತೆ ವ್ಯಕ್ತಡಿಸುತ್ತಿದ್ದಾರೆ ಎಂದು ದೂರಿದರು.
ಈ ಸಂದರ್ಭದಲ್ಲಿ ಪೋಷಕರಾದ ಸತೀಶ್ ಖಾರ್ವಿ, ಯುವ ಹೋರಾಟಗಾರ ಹಾಗೂ ಪತ್ರಕರ್ತ ರಮೇಶ್ ಮೆಂಡನ್, ಅನಿಲ್ ಕುಮಾರ್, ಅಜಿತ್ ಜೋಗಿ, ಮಹೇಶ್ ಸುವರ್ಣ, ಶ್ರೀಮತಿ ರತಿ ರಾಜೇಶ್, ಉಮೇಶ್ ಆಚಾರ್, ಸುಧಾಕರ್ ಮೊದಲಾದವರು ಉಪಸ್ಥಿತರಿದ್ದರು.