Connect with us

Hi, what are you looking for?

Diksoochi News

ಕರಾವಳಿ

ಉಡುಪಿ : ಬ್ಯಾಂಕ್ ಗಳು ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಬೇಕು : ಡಾ.ನವೀನ್ ಭಟ್

0


ಉಡುಪಿ: ವಾಣಿಜ್ಯ ಬ್ಯಾಂಕ್‍ಗಳಲ್ಲಿ ನಾಗರೀಕರು ವ್ಯವಹರಿಸಲು ಬಂದಾಗ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಿಗುವ ಸೌಲಭ್ಯಗಳ ನಿಖರ ಮಾಹಿತಿಯನ್ನು ಅವರುಗಳಿಗೆ ಒದಗಿಸುವುದರೊಂದಿಗೆ ಗರಿಷ್ಠ ಸೇವೆಯನ್ನು ನೀಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಹೇಳಿದರು.
ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾರ್ವಜನಿಕರು ಬ್ಯಾಂಕ್ ಗಳಲ್ಲಿ ವ್ಯವಹರಿಸಲು ಬಂದಾಗ ಬ್ಯಾಂಕಿಂಗ್ ಕಾರ್ಯ ವ್ಯಾಪ್ತಿಯಲ್ಲಿ ಬರುವ ಸೌಲಭ್ಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅವರಿಗೆ ಒದಗಿಸಿ, ಬ್ಯಾಂಕಿಂಗ್ ಕ್ಷೇತ್ರದ ಸೇವೆಗಳ ಬಗ್ಗೆ ಅವರು ವಿಶ್ವಾಸ ಹೊಂದುವಂತೆ ಮಾಡಿ, ಗರಿಷ್ಠ ಆರ್ಥಿಕ ಚಟುವಟಿಕೆಯನ್ನು ಬ್ಯಾಂಕ್ ಗಳ ಮೂಲಕ ನಿರ್ವಹಿಸುವಂತೆ ಮಾಡುವ ಮೂಲಕ ತಮ್ಮ ಕಾರ್ಯವ್ಯಾಪ್ತಿಯನ್ನು ಹೆಚ್ಚಿಸಬೇಕು ಎಂದರು.
ಬ್ಯಾಂಕ್ ಗಳಲ್ಲಿ ಜನಸಾಮಾನ್ಯರಿಗೆ ಸರಿಯಾದ ಸೇವಾ ಮಾಹಿತಿಗಳು ಒದಗಿಸುತ್ತಿಲ್ಲ ಎಂಬ ದೂರುಗಳು ಸಹ ಕೇಳಿಬರುತ್ತಿವೆ. ಇದಕ್ಕೆ ಆಸ್ಪದ ನೀಡದೇ ಉತ್ತಮ ಸೇವೆಯನ್ನು ಒದಗಿಸಲು ಮುಂದಾಗಬೇಕು ಎಂದರು.
ಜಿಲ್ಲೆಯಲ್ಲಿ ಸಾಲ ಠೇವಣಿ ಅನುಪಾತವು 2020 ಜೂನ್‍ನಲ್ಲಿ 45.27 ರಷ್ಟಿದ್ದು,ಪ್ರಸ್ತುತ 2021 ರ ಜೂನ್ ನಲ್ಲಿ 45.71 ರಷ್ಟಿದ್ದು, ಕ್ರೆಡಿಟ್ ಆಫ್ ಟೇಕ್ ಕನಿಷ್ಠ ಶೇ.60 ರಷ್ಠು ಇರಬೇಕು ಈ ಅನುಪಾತ ನಿಗಧಿತ ಗುರಿಯನ್ನು ಸಾಧಿಸಬೇಕು. ಜಿಲ್ಲೆಯಲ್ಲಿಇದರ ಸುಧಾರಣೆ ಅಗತ್ಯವಿದೆ ಎಂದ ಅವರು, ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ,ಇಂಡಿಯನ್ ಓವರ್ ಸೀಸ್ ಬ್ಯಾಂಕ್,ಐಡಿಬಿಐ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್ , ಆಕ್ಸಿಸ್ ಬ್ಯಾಂಕ್, ಎಸ್ ಬ್ಯಾಂಕ್ ಗಳು ನಿಗಧಿತ ಸಿಡಿ ಪ್ರಮಾಣ ಗುರಿ ಕಡಿಮೆ ಇರುತ್ತದೆ. ಇದರಲ್ಲಿ ಸುಧಾರಣೆ ಆಗಬೇಕು ಎಂದರು.
ಜಿಲ್ಲೆಯಲ್ಲಿ 2016-17 ನೇ ಸಾಲಿಗೆ ಹಾಗೂ 2018-19 ನೇ ಸಾಲಿನ ಅಡಿಕೆ ಮತ್ತು ಕಾಳು ಮೆಣಸಿನ ಹವಾಮಾನ ಆಧಾರಿತ ಬೆಳೆಯ ಸಮೀಕ್ಷೆಯ ಹೊಂದಾಣಿಕೆಯಾಗದೇ ಇರುವ ಪ್ರಕರಣಗಳಲ್ಲಿ ಬೆಳೆ ಸಾಲ ಪಡೆದ ರೈತರಿಗೆ ವಿಮೆ ಹಣ ದೊರಕಲು ಬ್ಯಾಂಕ್ ವತಿಯಿಂದ ಕ್ಷೇತ್ರ ಪರಿಶೀಲನೆ ನಡೆಸಿ, ವಿಮಾ ಕಂಪೆನಿಗಳಿಗೆ ಸೂಕ್ತ ದಾಖಲಾತಿಗಳನ್ನು ಸಲ್ಲಿಸುವ ಕಾರ್ಯವನ್ನು ಕೈಗೊಳ್ಳಲು ಕಳೆದ 2 ಸಭೆಗಳಲ್ಲಿ ಸೂಚನೆ ನೀಡಿದ್ದರೂ ಸೂಕ್ತ ಕಾರ್ಯವನ್ನು ಮಾಡದೇ ಇರುವ ಬ್ಯಾಂಕ್ ನ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಪತ್ರ ಬರೆಯುವ ಸೂಚನೆ ನೀಡಿದರು.
ಸರ್ಕಾರದ ವಿವಿಧ ಸಹಾಯ ಧನ ಆಧಾರಿತ ಅರ್ಥಿಕ ಸಹಾಯವನ್ನು ಒದಗಿಸಲು ಅರ್ಜಿಗಳನ್ನು ಶಿಫಾರಸ್ಸು ಮಾಡಿ, ಬ್ಯಾಂಕ್‍ಗಳಿಗೆ ಕಳುಹಿಸಿದಾಗ ಸಕಾರಣವಿಲ್ಲದೇ ಅರ್ಜಿಗಳನ್ನು ತಿರಸ್ಕರಿಸದೇ ನಿಗದಿತ ಕಾಲಾವಧಿಯಲ್ಲಿ ಅವರುಗಳಿಗೆ ಸೌಲಭ್ಯ ಒದಗಿಸಬೇಕು ಎಂದರು.
ಕೌಶಲ್ಯಾಭಿವೃಧ್ದಿ ತರಬೇತಿಗಳನ್ನು ಯುವಜನರಿಗೆ ಬ್ಯಾಂಕಿಂಗ್ ಸೆಕ್ಟರ್ ಗಳು ನೀಡಿದಾಗ , ಫಲಾನುಭವಿಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ ಸೌಲಭ್ಯಗಳನ್ನು ಒದಗಿಸಿ, ಅವರುಗಳನ್ನು ವೃತ್ತಿ ನಿರತರನ್ನಾಗಿಸುವುದರ ಜೊತೆಗೆ ಅರ್ಥಿಕವಾಗಿ ಸಬಲರನ್ನಾಗಿಸಬೇಕು ಎಂದರು.
ಆರ್.ಬಿ.ಐ ಬೆಂಗಳೂರಿನ ಎ.ಜಿ.ಎಂ ವೆಂಕಟೇಶ್ ಮಾತನಾಡಿ, 2000 ಕ್ಕೂ ಹೆಚ್ಚು ಜನಸಂಖ್ಯೆ ಇರುವ ಗ್ರಾಮಗಳಿಗೆ ಬ್ಯಾಂಕಿಂಗ್ ಸರ್ವಿಸ್ ಗಳನ್ನು ಒದಗಿಸಬೇಕು, ಬ್ಯಾಂಕಿಂಗ್ ವ್ಯವಹಾರಗಳು ಮುಂದಿನ ದಿನಗಳಲ್ಲಿ ಶೇ.100 ರಷ್ಟು ಡಿಜಿಟಲೀಕರಣವಾಗಬೇಕು. ಎಟಿಎಂಗಳಲ್ಲಿ ದಿನದ 24 ಗಂಟೆಯೂ ಹಣದ ಸೌಲಭ್ಯ ದೊರೆಯುವಂತೆ ಇರಬೇಕು. ಸಕಾರಣವಿಲ್ಲದೇ ಎಟಿಎಂ ಗಳು ವ್ಯವಹರಿಸದೇ ಇದ್ದಲ್ಲಿ, ಅಂತಹವುಗಳಿಗೆ ದಂಡ ವಿಧಿಸಲಾಗುವುದು ಎಂದರು.
ಲೀಡ್‍ಬ್ಯಾಂಕ್ ಮ್ಯಾನೇಜರ್ ಪಿ.ಎಂ.ಪಿಂಜಾರ್ ಮಾತನಾಡಿ, ಉಡುಪಿ ಜಿಲ್ಲೆಯ ವಿವಿಧ ಬ್ಯಾಂಕ್ ಗಳಲ್ಲಿ 28976 ಕೋಟಿ ರೂ ಯಷ್ಟು ಹಣ ಠೆವಣಿಯಾಗುವುದರೊಂದಿಗೆ ಶೇ.12.87 ರಷ್ಠು ಬೆಳವಣಿಗೆಯಾಗಿದೆ. 13247 ಕೋಟಿ ರೂ ಹಣವನ್ನು ಸಾಲದ ರೂಪದಲ್ಲಿ ನೀಡಲಾಗಿದ್ದು, ಇದರ ಬೆಳವಣಿಗೆ 9.14 ರಷ್ಟಿದೆ ಎಂದರು.
ಪ್ರಸ್ತುತ ಸಾಲಿನ ಪ್ರಥಮ ತ್ರೈಮಾಸಿಕದ ಕೊನೆಯ ಭಾಗದಲ್ಲಿ 2290 ಕೋಟಿ ರೂ ಗಳಷ್ಟು ಸಾಲ ನೀಡುವ ಗುರಿ ಇದ್ದು, 2252 ಕೋಟಿ ರೂ ಗಳಷ್ಟು ಸಾಲ ನೀಡಿ ಶೇ.98.34 ರಷ್ಟು ಸಾಧನೆ ಮಾಡಲಾಗಿದೆ. ಕೃಷಿ ವಲಯಕ್ಕೆ 757 ಕೋಟಿ, ಸೂಕ್ಷ, ಸಣ್ಣ ಹಾಗೂ ಮಧ್ಯಮ ವಲಯಗಳಿಗೆ 351 ಕೋಟಿ, ವಿಧ್ಯಾಭ್ಯಾಸಕ್ಕೆ 6 ಕೋಟ , ಗೃಹ ಸಾಲ 61 ಕೋಟಿ, ಮತ್ತಿತರ ಆದ್ಯತಾ ವಲಯಕ್ಕೆ 1196 ಕೋಟಿ, ಆದ್ಯತೆಯಲ್ಲದ ವಲಯಕ್ಕೆ 517 ಕೋಟಿ ಸಾಲ ನೀಡಲಾಗಿದೆ ಎಂದರು.
ಸಭೆಯಲ್ಲಿ ಉಡುಪಿ ಪ್ರಾದೇಶಿಕ ಕಚೇರಿ ಪ್ರಬಂಧಕ ಕೆ.ಕಾಳಿ, ನಬಾರ್ಡ್ ಎಜಿಎಂ ಸಂಗೀತಾ ಕರ್ತ, ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಡಾ.ವಾಸಪ್ಪ, ರೀಜಿನಲ್ ಮ್ಯಾನೇಜರ್ ಲೀನಾ ಪೀಟರ್ ಪಿಂಟೊ, ಹಾಗೂ ವಿವಿಧ ಇಲಾಖೆ ಮತ್ತು ಬ್ಯಾಂಕ್‍ಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!