ಕುಂದಾಪುರ: ಶಹೀನ್ ಚಂಡಮಾರುತದ ಪರಿಣಾಮದಿಂದ ಮಂಗಳವಾರ ಸಂಜೆ ವೇಳೆಗೆ ಬೀಸಿದ ಭಾರಿ ಸುಂಟರಗಾಳಿಯಿಂದಾಗಿ ಕುಂದಾಪುರ ತಾಲೂಕಿನ ಅಂಪಾರು ಮೂಡುಬಗೆ ಪ್ರದೇಶದಲ್ಲಿ ತೋಟದಲ್ಲಿನ ಸಾವಿರಾರು ಅಡಿಕೆ ಮರಗಳು, ನೂರು ತೆಂಗಿನ ಮರಗಳು ಸಂಪೂರ್ಣ ಧರಾಶಾಹಿಯಾಗಿದ್ದು ಹಲವು ಮನೆಗಳು ಹಾನಿಯಾಗಿದ್ದು ಹಲವರ ಬದುಕು ಮೂರಾಬಟ್ಟೆಯಾಗಿದೆ. ಘಟನಾ ಸ್ಥಳಕ್ಕೆ ಮಾಜಿ ಶಾಸಕ ಗೋಪಾಲ ಪೂಜಾರಿ ಭೇಟಿ, ನೀಡಿ ಪರಿಶೀಲಿಸಿದರು. ಈ ಸಂದರ್ಭ ತುರ್ತು ಅಗತ್ಯವಿರುವ ಮನೆಗಳಿಗೆ ವಂಡ್ಸೆ ಬ್ಲಾಕ್ ಕಾಂಗ್ರೆಸ್ ವತಿಯಿಂದ 1200ಕ್ಕೂ ಅಧಿಕ ಹಂಚುಗಳನ್ನು ವಿತರಿಸಲಾಯಿತು.
ಈ ಸಂಧರ್ಭ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಶೆಟ್ಟಿ ಗುಡಿಬೆಟ್ಟು,ಕಿರಣ್ ಹೆಗ್ಡೆ ಗ್ರಾಮ ಪಂಚಾಯತ್ ಸದಸ್ಯರು ಅಂಪಾರು,ಜ್ಯೋತಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.
ಸುಂಟರಗಾಳಿಗೆ ನಲುಗಿದ ಜನರು :
ಅಂಪಾರಿನ ಮೂಡುಬಗೆ ಗ್ರಾಮದಲ್ಲಿ ಮಂಗಳವಾರ ಸಂಜೆ 3 ಗಂಟೆ ಬಳಿಕ ಬೀಸಿದ ಭಾರಿ ಸುಂಟರಗಾಳಿಗೆ 50 ಕ್ಕೂ ಅಧಿಕ ಕುಟುಂಬ ಅಕ್ಷರಶಃ ನಲುಗಿ ಹೋಗಿದೆ. ಒಟ್ಟು 6000ಕ್ಕೂ ಅಧಿಕ ಅಡಿಕೆ ಮರ, ನೂರಾರು ತೆಂಗಿನ ಮರಗಳು ಧರೆಗುರುಳಿದೆ. 50ಕ್ಕೂ ಅಧಿಕ ಮನೆಗಳು ಸಂಪೂರ್ಣ ಹಾನಿಯಾಗಿದ್ದು ಜನರು ಸಮಸ್ಯೆಗೀಡಾಗಿದ್ದಾರೆ. ಅಡಿಕೆಯನ್ನು ನಂಬಿಕೊಂಡಿರುವ ಈ ಭಾಗದ ಜನರ ಬದುಕಲ್ಲಿ ಬೀಸಿದ ಸುಂಟರಗಾಳಿ ಕೋಲಾಹಲ ಎಬ್ಬಿಸಿದೆ. ಹಲವು ವಿದ್ಯುತ್ ಕಂಬಗಳು ಧರೆಗುರುಳಿದ್ದವು.