ವರದಿ: ದಿನೇಶ್ ರಾಯಪ್ಪನಮಠ
ಕುಂದಾಪುರ: ಕಳೆದೆರಡು ವರ್ಷದಿಂದ ಹಬ್ಬಗಳ ಆಚರಣೆಗೆ ಅಂಟಿದ್ದ ಕರೋನಾ ಹೆಮ್ಮಾರಿಯಿಂದ ಈ ವರ್ಷ ಕೊಂಚ ವಿಶ್ರಾಂತಿ ದೊರಕಿದ್ದು, ಮತ್ತೆ ತಾಸೆಯ ಸದ್ದು ಕೇಳಲಾರಂಭಿಸಿದೆ. ಪ್ರತಿ ವರ್ಷ ಕರಾವಳಿ ಭಾಗದಲ್ಲಿ ಗಣೇಶ ಚತುರ್ಥಿ, ದಸರಾಕ್ಕೆ ಹುಲಿವೇಷ ಸದ್ದು ಎಲ್ಲರನ್ನು ಮನೋರಂಜನೆಗೊಳಿಸುತ್ತಿತ್ತು.
ಕುಂದಾಪುರದ ಟಿ.ಟಿ ರಸ್ತೆಯ ಭರತ್ಕಲ್ ನ ಬಸವೇಶ್ವರ ಯುವಕ ಮಂಡಲದವರ ಆಶ್ರಯದಲ್ಲಿ ಟಿ.ಟಿ ಟೈಗರ್ಸ್ ಸತತ 21 ವರ್ಷಗಳಿಂದ ಹುಲಿವೇಷ ಹಾಕುತ್ತಾ ಬಂದಿದ್ದು, ಈ ವರ್ಷ ವಿಭಿನ್ನವಾಗಿ ಹುಲಿವೇಷ ಹಾಕಿದ್ದಾರೆ. ಎರಡು ವರ್ಷದಲ್ಲೇ ಜನ ಹುಲಿವೇಷವನ್ನು ಮರೆತಿದ್ದು, ಕಲೆ ನಶಿಸಿ ಹೋಗಬಾರದೆಂದೂ ಕರೋನಾ ಹಾವಳಿಯ ನಡುವೆಯೂ ಹುಲಿವೇಷ ಹಾಕಿ ಪೇಟೆ ಸುತ್ತುತ್ತಿದ್ದಾರೆ.
ನಾಗರಾಜ್, ರೋಹಿತ್, ಚರಣ್, ನಯನ್ ಕುಮಾರ್ ಉಸ್ತುವಾರಿಯಲ್ಲಿ ಯುವಕರ ತಂಡವೊಂದು ಉಡುಪಿ, ಮಂಗಳೂರಿಗರಿಗಿಂತ ಭಿನ್ನವಾಗಿ ಬಣ್ಣ ಹಚ್ಚಿ ನೂತನ ಶೈಲಿಯ ಹುಲಿ ಹೆಜ್ಜೆ ಹಾಕಿ ಕಲಾಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ನವರಾತ್ರಿ 8 ದಿನಗಳ ಕಾಲ ಬಣ್ಣ ಹಚ್ಚಿಕೊಳ್ಳುವ ಇವರು ಕುಂದೇಶ್ವರ ದೇವಸ್ಥಾನದ ಶಾರದೋತ್ಸವ ವಿಸರ್ಜನಾ ಮೆರವಣಿಗೆಯಲ್ಲಿ ಭಾಗವಹಿಸಿ ಆ ವರ್ಷದ ಕುಣಿತವನ್ನು ಕೊನೆಗೊಳಿಸುತ್ತಾರೆ.
ಟಿ.ಟಿ ಟೈಗರ್ಸ್ ಎಂಬ ಹುಲಿವೇಷ ತಂಡವನ್ನು ಹುಟ್ಟು ಹಾಕಿದ್ದು ವಿಲ್ಫ್ರೇಡ್ ಡಿಸೋಜಾ ಅವರ ನಂತರ ಅವರ ಶಿಷ್ಯಂದಿರು ಯಶ್ವಸಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ. ಪ್ರತಿ ವರ್ಷ ಕುಂದಾಪುರದ ಎಲ್ಲಾ ಮನೆಯವರು ಟಿ.ಟಿ ಟೈಗರ್ಸ್ ತಂಡ ಮನೆಗೆ ಬರುವುದನ್ನೇ ಕಾಯುತ್ತಿರುತ್ತಾರೆ.