ಕುಂದಾಪುರ: ತಾಲೂಕಿನ ಆದರ್ಶ ಗ್ರಾಮ ಹೆಗ್ಗಳಿಕೆಗೆ ಪಾತ್ರವಾದ ಅತ್ಯಂತ ಕುಗ್ರಾಮವಾಗಿರುವ ಕೇರಾಡಿಯಲ್ಲಿ ಕ್ಷಯ ಮುಕ್ತ ಗ್ರಾಮದ ಸಮುದಾಯದ ಸಹಭಾಗಿತ್ವ ಕಾರ್ಯಕ್ರಮವನ್ನು ಕೆರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಿರಿಜಾ ಶೆಟ್ಟಿ ಉದ್ಘಾಟಿಸಿದರು. ಪಂಚಾಯಿತಿನ ಸದಸ್ಯ ರಾಘವೇಂದ್ರ ಕೊಠಾರಿ ಹಾಗೂ ಮಂಜುನಾಥ ಕೊಠಾರಿ ಮಾತನಾಡಿ, ಇಡೀ ಗ್ರಾಮವನ್ನು ಕ್ಷಯ ಮುಕ್ತ ಮಾಡಲು ಕೆರಾಡಿ ಗ್ರಾಮ ಪಂಚಾಯತ್ ಸಹಕರಿಸುವುದಾಗಿ ತಿಳಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗುರುಮೂರ್ತಿ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾಕ್ಟರ್ ಪ್ರವೀಣ್ ಶೆಟ್ಟಿ, ಕುಂದಾಪುರ ತಾಲೂಕು ಆಸ್ಪತ್ರೆಯ ಎನ್ ಸಿ ಡಿ ವಿಭಾಗದ ವೈದ್ಯಾಧಿಕಾರಿ ಡಾ. ರಂಜಿತಾ ಉಪಸ್ಥಿತರಿದ್ದರು. ಕಾರ್ಯಕ್ರಮದ ಉದ್ದೇಶದ ಕುರಿತು ಹಿರಿಯ ಮೇಲ್ವಿಚಾರಕ ಆಲಂದೂರು ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಸಂಯೋಜಕ ಕುಂದಾಪುರ ತಾಲೂಕಿನ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಗುರುದಾಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಜಿಲ್ಲಾ ಪಿಪಿಎಮ್ ಒ ಸುರೇಶ್ ಸಾಲಿಗ್ರಾಮ ಸ್ವಾಗತಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಕೆರಾಡಿ ಗ್ರಾಮದ ಸಾರ್ವಜನಿಕರಿಗೆ ಮಧುಮೇಹ, ರಕ್ತದೊತ್ತಡ, ಹಾಗೂ ಎಚ್ಐವಿ ಪರೀಕ್ಷೆಯನ್ನು ನಡೆಸಲಾಯಿತು. ಆಶಾ ಕಾರ್ಯಕರ್ತರು ತಂಡೋಪಾದಿಯಾಗಿ ಮನೆ ಮನೆಗೆ ಭೇಟಿ ಕೊಟ್ಟು ಕ್ಷಯ ರೋಗದ ಬಗ್ಗೆ ಅರಿವು ಮತ್ತು ತಿಳಿವಳಿಕೆ ಮೂಡಿಸಿ ಟಿವಿ ಸರ್ವೇ ಕಾರ್ಯಕ್ರಮ ನಡೆಸಿದರು.