ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ಸುಮಾರು ಮೂರು ವರ್ಷಗಳಿಂದ ಉಡುಪಿ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಸಭೆ ಕರೆಯದೇ ಜಿಲ್ಲಾಡಳಿತ ಅಸ್ಪೃಶತೆ ಆಚರಣೆ ಮಾಡುತ್ತಿದೆ. ಕೂಡಲೇ ಜಿಲ್ಲಾಧಿಕಾರಿಯವರು ಸಭೆ ಕರೆದು ದಲಿತರ ಕುಂದುಕೊರತೆಯನ್ನ ಆಲಿಸಬೇಕು. ಇಲ್ಲವಾದಲ್ಲಿ ಡಿಸಿ ಕಚೇರಿ ಎದುರು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮಘರ್ಜನೆ)ಯ ವತಿಯಿಂದ ಪ್ರತಿಭಟನೆ ನಡೆಸುತ್ತೇವೆ ಎಂದು ಭೀಮಘರ್ಜನೆಯ ತಾಲೂಕು ಸಂಘಟನಾ ಸಂಚಾಲಕ ವಿಜಯ್ ಕೆ.ಎಸ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಗ್ರಾಮ ಗ್ರಾಮದಲ್ಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅದೆಷ್ಟೋ ಸಮಸ್ಯೆಗಳನ್ನು ಆಲಿಸದೆ ಜಿಲ್ಲೆಯಲ್ಲಿ ಪರಿಶಿಷ್ಟರನ್ನು ಜಿಲ್ಲಾಡಳಿತ ಕಡೆಗೆಣಿಸುತ್ತಿದೆ. ಈ ಬಗ್ಗೆ ದಲಿತ ಮುಖಂಡರುಗಳು ಬಹಳಷ್ಟು ಬಾರಿ ಮನವಿ ಮಾಡಿಕೊಂಡರು ಸಭೆ ಕರೆಯದೇ ಪರಿಶಿಷ್ಟರ ಸಮಸ್ಯೆಗಳನ್ನ ಕತ್ತಲೆಯಲ್ಲೇ ಇಟ್ಟು ಕಡೆಗೆಣಿಸುತ್ತಿದ್ದಾರೆ. ಜಿಲ್ಲೆಯ ಮೂಲೆ ಮೂಲೆಯಲ್ಲೂ ದಲಿತರ ಮೇಲೆ ಇಂದಿಗೂ ದೌರ್ಜನ್ಯಗಳು ನಡೆಯುತ್ತಲೇ ಇದೆ. ಈ ಬಗ್ಗೆ ಜಿಲ್ಲಾಡಳಿತ ಯಾವ ಕ್ರಮಕ್ಕೂ ಮುಂದಾಗಿಲ್ಲ. ದಲಿತರಿಗೆ ನ್ಯಾಯವು ನೀಡದೆ ದಲಿತರ ಸಮಸ್ಯೆಗಳನ್ನು ಆಲಿಸದೇ ದಲಿತರನ್ನ ದೂರವಿಟ್ಟು ಅಧಿಕಾರ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.