ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ದೀಪದಿಂದ ದೀಪವಾ, ಹಚ್ಚಬೇಕು ಮಾನವ, ಪ್ರೀತಿಯಿಂದ ಪ್ರೀತಿ ಹಂಚಲು ಎನ್ನುವ ಹಾಡಿನ ಸಾಲಿಗೆ ಪೂರಕವಾಗಿ ಈ ದೀಪವಾಳಿಗೆ ಪ್ರೀತಿಯಿಂದ ಮಾಡಿರುವ ಸ್ವದೇಶಿ ಗೋಮಾತೆಯ ಗೋಮಯದ ಜತೆಗೆ ಪಂಚಗವ್ಯದಿಂದ ತಯಾರಿಸಿದ ದೀಪಗಳು ಮಾರುಕಟ್ಟೆಗೆ ಲಗ್ಗೆ ಇಡಲಿದೆ.
ದೀಪಗಳ ಹಬ್ಬ ಎಂದೇ ಬಣ್ಣಿಸಲ್ಪಡುವ ದೀಪಾವಳಿ ಹಬ್ಬಕ್ಕೆಂದು ಈ ಬಾರಿ ಬೀಜಾಡಿ ಕಪಿಲೆ ಗೋ ಸಮೃದ್ಧಿ ಟ್ರಸ್ಟ್ ಇವರು ಪಂಚಗವ್ಯ ಗೋ ದೀಪಗಳನ್ನು ತಯಾರಿಸಿ ಗ್ರಾಹಕರಿಗೆ ತಲುಪಿಸುವ ಕೈಂಕರ್ಯಕ್ಕೆ ಮುಂದಾಗಿದ್ದಾರೆ. ಈ ಬಾರಿಯ ದೀಪಾವಳಿಯ ಹಬ್ಬದ ಜ್ಯೋತಿ ಕೇವಲ ಮನೆಯನ್ನು ಮಾತ್ರವಲ್ಲ ಆತ್ಮನಿರ್ಭರ ಭಾರತದ ಕಲ್ಪನೆಯ ಮೂಲಕ ರಾಷ್ಟ್ರದ ವೋಕಲ್ ಫಾರ್ ಲೋಕಲ್ ಅಭಿಯಾನಕ್ಕೆ ಪುಷ್ಟಿ ನೀಡುವಂತಿದೆ.
ಗೋಮಯ, ತುಪ್ಪ, ಮೊಸರು, ಹಾಲು, ಜೇಡಿಮಣ್ಣು ಮತ್ತು ಅರಿಶಿನವನ್ನು ಸೇರಿಸಿ ಈ ದೀಪವನ್ನು ತಯಾರು ಮಾಡಲಾಗುತ್ತಿದೆ. ಈ ದೀಪದ ಬಳಕೆಯ ನಂತರ ದೀಪದ ಬೂದಿಯು ಗೊಬ್ಬರವಾಗಿ ಉಪಯೋಗವಾಗಲಿದೆ.
ಪರಿಸರ ಮಾಲಿನ್ಯಕ್ಕೆ ತಡೆ: ಈಗಾಗಲೇ ಬೇರೆ ಬೇರೆ ಪ್ಲಾಸ್ಟಿಕ್ ಮತ್ತು ಸಿರಾಮಿಕ್ ದೀಪಗಳಿಂದ ಪರಿಸರ ಮಾಲಿನ್ಯವಾಗುವ ಮೂಲಕ ಮಾನವ ದೇಹದ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ. ಇವೆಲ್ಲವನ್ನೂ ತಡೆಗಟ್ಟುವ ಸಲುವಾಗಿ ಗೋಶಾಲೆಯಲ್ಲಿ ವಿವಿಧ ರೀತಿಯ ಪ್ರಾಕೃತಿಕ ಬಣ್ಣಗಳಿಂದ ತಯಾರಿಸಿದ ಈ ಗೋ ದೀಪವು ಪರಿಸರ ಪೂರಕವಾಗಿ ಸಹಕರಿಯಾಗುತ್ತದೆ. ಇದರಿಂದ ಸ್ಥಳೀಯ ಮಾರಾಟಗಾರರಿಗೆ ಲಾಭದ ಜೊತೆ ಪರಿಸರ ಮಾಲಿನ್ಯವನ್ನು ತಡೆಯುವ ಮೂಲಕ ಪ್ರಾಣಿ ಮತ್ತು ಪಕ್ಷಿಗಳಿಗೂ ಅನುಕೂಲವಾಗಲಿದೆ.
ಆತ್ಮನಿರ್ಭರ ಭಾರತದ ಕಲ್ಪನೆ: ಪಂಚಗವ್ಯ ಗೋಮಯ ದೀಪಗಳು ಶುದ್ಧ ಗೋಮಯ ಮತ್ತು ದೇಸಿ ತುಪ್ಪಗಳ ಬಳಕೆಯಿಂದ ತಯಾರಿಸಲಾದ ಹಣತೆಗಳಿವು. ಈ ದೀಪಗಳ ಬಳಕೆಯಿಂದ ಪರಿಸರವನ್ನು ಶುದ್ಧೀಕರಿಸುತ್ತದೆ. ಈ ಬಾರಿ ದೀಪಾವಳಿ ಹಬ್ಬವನ್ನು ಗೋಮಯ ಹಣತೆಗಳಿಂದ ಆಚರಿಸುವ ಮೂಲಕ ಗೋಶಾಲೆಗಳಿಗೆ ಆರ್ಥಿಕವಾಗಿ ನೆರವು ನೀಡುತ್ತ ಸ್ವದೇಶಿ ಆತ್ಮ ನಿರ್ಭರ ಭಾರತದ ಕಲ್ಪನೆಯಲ್ಲೊಂದಾಗಿದೆ.