ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ನರೇಂದ್ರ ಮೋದಿಯಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ಅವರಿಗೆ ಜನರ ಕಷ್ಟ ಗೊತ್ತಿಲ್ಲ. ಜನರ ಬದುಕಿನಲ್ಲಿ ಚೆಲ್ಲಾಟ ಆಡುತ್ತಿದ್ದಾರೆ. ನಾವು ಜನರ ಜೊತೆಗೆ ಇದ್ದೇವೆ. ಕಾಂಗ್ರೆಸ್ ಪಕ್ಷಕ್ಕಾಗಿ ಕೊನೆಯ ತನಕ ದುಡಿಯುವೆ. ಜನರ ಸೇವೆ ಮಾಡುವೆ. ಯಾವುದೇ ಹಣಕ್ಕೆ ಕೈ ಒಡ್ಡುವುದಿಲ್ಲ. ಕಾಂಗ್ರೆಸ್ ನಮ್ಮ ಹೆಮ್ಮೆ. ನಮ್ಮ ಶಕ್ತಿ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಹೇಳಿದರು.
ಅವರು ಹೆಬ್ರಿ ಕಾಂಗ್ರೆಸ್ ವತಿಯಿಂದ ಚೈತನ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಇಂದಿರಾ ನಮನ – ಇಂದಿರಾ ಗಾಂಧಿ ಜನ್ಮ ದಿನಾಚರಣೆಯಲ್ಲಿ ನಮನ ಸಲ್ಲಿಸಿ ಮಾತನಾಡಿದರು.
ಇಂದಿರಾ ಗಾಂಧಿ ಸಹಿತ ಕಾಂಗ್ರೆಸ್ ಜನರ ಬದುಕಿಗೆ ಶಾಶ್ವತ ಕೊಡುಗೆ. ಕಾಂಗ್ರೆಸ್ ಜನ ಜೀವನ ಪಕ್ಷವಾಗಿದೆ. ಅದೊಂದು ಪಕ್ಷ, ಅದೊಂದು ಶಕ್ತಿ, ಹುಟ್ಟಿನಿಂದ ಸಾವಿನ ತನಕ ನಮ್ಮ ಬದುಕು ಕಾಂಗ್ರೆಸ್ ಪಕ್ಷಕ್ಕೆ ಮೀಸಲು. ಇಂದಿರಾ ಗಾಂಧಿ ಸ್ಥಿತಿವಂತರಿಗೆ ಖಡಕ್ ಆಗಿ ಜನಸಾಮಾನ್ಯರಿಗೆ ಕರುಣಾಮಯಿಯಾಗಿದ್ದರು ಎಂದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಮಾತನಾಡಿ, ಇಂದಿರಾ ಗಾಂಧಿ ಜನರ ಬದುಕು ಕಟ್ಟಲು ರಾಜಕೀಯದ ಮೂಲಕ ಹೋರಾಟ ಮಾಡಿದ್ದಾರೆ. ಜನರಿಗೆ ಮೂಲ ಸೌಕರ್ಯಕ್ಕಾಗಿ ಬದುಕು ಸವೆಸಿದ್ದಾರೆ. ಜನರ ಮನೆ ಮನದಲ್ಲಿ ಇಂದಿರಾ ಗಾಂಧಿ ಅಜರಾಮರರಾಗಿದ್ದಾರೆ ಎಂದರು.
ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರಾಘವ ದೇವಾಡಿಗ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಂಜನಿ ಹೆಬ್ಬಾರ್, ವಿವಿಧ ಘಟಕಗಳ ಪ್ರಮುಖರಾದ ಪ್ರಕಾಶ್ ಪೂಜಾರಿ, ಗಣೇಶ ಪೂಜಾರಿ, ಹೆಚ್ .ಬಿ. ಸುರೇಶ್, ದಿನೇಶ್ ಶೆಟ್ಟಿ, ಎಚ್.ಜನಾರ್ದನ್, ಚಂದ್ರಶೇಖರ ಬಾಯರಿ ಮೊದಲಾದವರು ಉಪಸ್ಥಿತರಿದ್ದರು.