ವರದಿ : ದಿನೇಶ್ ರಾಯಪ್ಪನಮಠ
ವಕ್ವಾಡಿ : ಹುಟ್ಟೂರ ಹೆಸರನ್ನು ಜಗದಗಲ ಪಸರಿಸಿದ ಕೀರ್ತಿ ಪ್ರವೀಣ್ ಶೆಟ್ಟಿಯವರದ್ದು. ಪ್ರವೀಣ್ ಶೆಟ್ಟಿ ಕೇವಲ ಒಬ್ಬ ವ್ಯಕ್ತಿ ಅಲ್ಲ. ಅದೊಂದು ದೊಡ್ಡ ಶಕ್ತಿ. ಈ ಶಕ್ತಿಯನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ ನಾವು ಬೆಳಗಿಸಬೇಕಾಗಿದೆ. ಇದರ ಪ್ರತಿಫಲವಾಗಿ ಹೊರನಾಡ ಕನ್ನಡಿಗ ಸೇವಾ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದು ಹುಟ್ಟೂರ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಮಾಜಿ ಶಾಸಕ, ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆಯವರು ಹೇಳಿದರು.
ವಕ್ವಾಡಿ, ಬೀಜಾಡಿ, ಗೋಪಾಡಿ, ಕುಂಭಾಸಿ, ಕೋಟೇಶ್ವರ ಸೇರಿದಂತೆ ಸಮಸ್ತ ನಾಗರೀಕರ ನೇತೃತ್ವದಲ್ಲಿ ವಕ್ವಾಡಿಯ ಕನಕ ಸಭಾಂಗಣದಲ್ಲಿ ಜರುಗಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರವೀಣ ಕುಮಾರ್ ಶೆಟ್ಟಿ ವಕ್ವಾಡಿ ಇವರ ಹುಟ್ಟೂರ ಸನ್ಮಾನ ಸಮಾರಂಭದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅವರು ನಾವೆಲ್ಲರೂ ಒಗ್ಗಟ್ಟಾಗಿ ಪ್ರವೀಣ್ ಶೆಟ್ಟಿಯವರಿಗೆ ಹುಟ್ಟೂರ ಸನ್ಮಾನ ನೀಡಿ ಗೌರವಿಸಿ ಅವರಲ್ಲಿ ಇನ್ನಷ್ಟು ಶಕ್ತಿ ತುಂಬಿಸುವ ಕೆಲಸಗಳು ನಮ್ಮಿಂದಾಗ ಬೇಕಾಗಿದೆ. 2022ನೇ ಜ.9ರಂದು ವಕ್ವಾಡಿಯಲ್ಲಿ ಧರ್ಮಸ್ಥಳದ ಪೂಜ್ಯನೀಯ ವೀರೇಂದ್ರ ಹೆಗಡೆಯವರು, ಸರಕಾರದ ಪ್ರತಿನಿಧಿಗಳು, ಸಾಮಾಜಿಕ ಚಿಂತಕರು, ಶೈಕ್ಷಣಿಕ ತಜ್ಞರು, ಚಿತ್ರನಟರು, ಸಾಂಸ್ಕøತಿಕ ದಿಗ್ಗಜರು ಸೇರಿದಂತೆ ಹಲವಾರೂ ಮಂದಿ ಭಾಗವಹಿಸಲಿದ್ದಾರೆ. ಈಗಾಗಲೇ ಹಲವು ಜವಬ್ದಾರಿ ಸಮಿತಿಗಳನ್ನು ರಚಿಸಲಾಗಿದೆ. ಕೇವಲ ಕಾರ್ಯಕ್ರಮ ಮಾಡಲು ಸಮಿತಿಗಳಿವೆ ಎಂಬ ಭಾವನೆ ಯಾರಿಗೂ ಬಾರದೇ ನಮ್ಮ ಮನೆಯ ಕಾರ್ಯಕ್ರಮ ಎಂಬ ಧ್ಯೇಯೋದ್ದೇಶ ಇಟ್ಟುಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದು ಕರೆ ನೀಡಿ ಮಾತನಾಡಿದರು.
ಪ್ರಚಾರ ಸಮಿತಿ ಅಧ್ಯಕ್ಷ ಕುಂದಾಪುರದ ಹಿರಿಯ ಪತ್ರಕರ್ತ, ಡಾ.ಸುಧಾಕರ್ ನಂಬಿಯಾರ್ ಕಾರ್ಯಕ್ರಮದ ರೂಪುರೇಷೆಗಳ ಕುರಿತು ಮಾಹಿತಿ ನೀಡಿ ಮಾತನಾಡಿದರು. ಉದ್ಯಮಿ ಸುಧೀರ್ ಕುಮಾರ್ ಶೆಟ್ಟಿ ಮಾರ್ಕೋಡು, ಕಾಳಾವರ ಪಂಚಾಯತ್ ಅಧ್ಯಕ್ಷೆ ಆಶಾಲತಾ ಶೆಟ್ಟಿ ಉಪಸ್ಥಿತರಿದ್ದರು.
ಸ್ಥಳೀಯರಾದ ಸುಧೀರ್ ಶೆಟ್ಟಿ ಮೇಲ್ಮನೆ, ಬಾಲಚಂದ್ರ ಶೆಟ್ಟಿ, ಉಪನ್ಯಾಸಕರ ರಂಜಿತ್ ಕುಮಾರ್ ಶೆಟ್ಟಿ ಮತ್ತಿತರರು ಕಾರ್ಯಕ್ರಮ ಕುರಿತು ಅನಿಸಿಕೆ ಹಂಚಿಕೊಂಡರು.
ಶಿಕ್ಷಕ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಹಿರಿಯ ಶಿಕ್ಷಕ ವೇಣುಗೋಪಾಲ ಹೆಗ್ಡೆ ಪ್ರಸ್ತಾವಿಕ ಮಾತನಾಡಿದರು. ಸತೀಶ್ ಪೂಜಾರಿ ವಕ್ವಾಡಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಸದಾನಂದ ಶೆಟ್ಟಿ ವಕ್ವಾಡಿ ವಂದಿಸಿದರು.