ಕುಂದಾಪುರ : ಕರ್ಕುಂಜೆ ಗ್ರಾಮದ ‘ಬುದ್ದನ ಜೆಡ್ಡು’ ಎಂಬ ಪುರಾತನ ಸ್ಥಳಕ್ಕೆ ಅಣದೂರು ಬುದ್ಧವಿಹಾರದ ಪೂಜ್ಯ ವರಜ್ಯೋತಿ ಬಂತೇಜಿಯವರು ಭೇಟಿ ನೀಡಿದರು. ಇದು 1800-2000 ವರ್ಷ ಇತಿಹಾಸವುಳ್ಳ ಸ್ಥಳವಾಗಿದೆ ಎಂದು ಅಭಿಪ್ರಾಯಪಟ್ಟ ಅವರು, ಕಲ್ಲು ಪಾರೆ ಮೇಲಿರುವ ಜಿಂಕೆಗಳೆರಡರ ಗುರುತು, ಮಾನವ ರೇಖಾಚಿತ್ರ, ಪಾದದ ಗುರುತುಗಳನ್ನು, ಅಷ್ಟಾಂಗ ಚಕ್ರ ಸಹಿತ ಬುದ್ಧ ಧರ್ಮದ ವಿವಿಧ ಕುರುಹುಗಳನ್ನು ವೀಕ್ಷಿಸಿದ ಬಂತೇಜಿಯವರು ಬೋಧಿ ವೃಕ್ಷಕ್ಕೆ ಬೋಧಿ ವಂದನೆ ನೆರವೇರಿಸಿದರು. ಭಗವಾನ್ ಬುದ್ಧರು ಬೋಧಿಸಿದ ಅಷ್ಟಾಂಗ ಮಾರ್ಗದ ಚಕ್ರಗಳು, ಜಿಂಕೆ ವನ ಹಾಗೂ ಇಲ್ಲಿನ ಕುರುಹುಗಳನ್ನು ಗಮನಿಸಿದರೆ ಬೌದ್ಧ ಬಿಕುಗಳು ಧ್ಯಾನ ಮಾಡಿದ ಶೃದ್ಧಾ ಕೇಂದ್ರವಾಗಿರಬಹುದೆಂದು ಎಂದು ಬಣ್ಣಿಸಿದರು. ಸರಕಾರ, ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಮತ್ತು ಪುರಾತತ್ವ ಇಲಾಖೆ ಇಲ್ಲಿ ಸಂಶೋಧನೆ ನಡೆಸಿ ಜಗತ್ತಿಗೆ ಇಲ್ಲಿನ ಮಹತ್ವ ಸಾರಬೇಕು ಎಂದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಭೀಮಘರ್ಜನೆ ರಾಜ್ಯ ಸಂಚಾಲಕ ಉದಯ್ ಕುಮಾರ್ ತಲ್ಲೂರು, ರಾಜ್ಯ ಸಂಘಟನಾ ಸಂಚಾಲಕ ನಾಗಣ್ಣ ಕಲ್ಲದೇವನಹಳ್ಳಿ, ತಾಲೂಕು ಸಂಘಟನಾ ಸಂಚಾಲಕ ವಿಜಯ ಕುಮಾರ್, ಚಂದ್ರಮ ತಲ್ಲೂರು ಇದ್ದರು.