ಬೆಂಗಳೂರು : ಓಮಿಕ್ರಾನ್ ರೂಪಾಂತರ ತಳಿ ಬಗ್ಗೆ ತೀವ್ರ ಆತಂಕ ಬೇಡ. ರಾಜ್ಯದಲ್ಲಿ ಲಾಕ್ಡೌನ್ ಮಾಡುವ ಯಾವುದೇ ಪ್ರಸ್ತಾಪ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು
ಲಾಕ್ ಡೌನ್ ಪ್ರಸ್ತಾಪವಿಲ್ಲ:
ಲಾಕ್ಡೌನ್ ಆಗಲಿದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳ ಮೂಲಕ ಹರಡುತ್ತಿದೆ. ಸಾರ್ವಜನಿಕರು ಇಂತಹ ಊಹಾಪೋಹಗಳಿಗೆ ಕಿವಿಗೊಡಬಾರದು. ಲಾಕ್ಡೌನ್ ಮಾಡುವ ಅಗತ್ಯವೇ ಇಲ್ಲ. ಸರ್ಕಾರದ ಮುಂದೆ ಅಂತಹ ಪ್ರಸ್ತಾಪವೂ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಓಮಿಕ್ರಾನ್ ವೈರಸ್ ತಗುಲಿದಂತಹ ರೋಗಿಗಳನ್ನು ತಪಾಸಣೆ ಮಾಡಿದಾಗ ಅವರಲ್ಲಿ ತೀವ್ರ ತರಹದ ರೋಗಲಕ್ಷಣಗಳು ಕಂಡುಬಂದಿಲ್ಲ. ಈಗಾಗಲೇ ಈ ವೈರಸ್ ಕಂಡುಬಂದ ದೇಶಗಳಲ್ಲಿ ಆಸ್ಪತ್ರೆಗೆ ಬರುವವರು ಮತ್ತು ಐಸಿಯುಗಳಲ್ಲಿ ದಾಖಲಾಗುವ ಪ್ರಮಾಣವೂ ಕಡಿಮೆ ಇದೆ ಎಂದು ಹೇಳಿದರು.
ಮತ್ತಷ್ಟು ಆತಂಕಕ್ಕೆ ದೂಡದಿರಿ :
ಈ ಹಿಂದಿನ ಲಾಕ್ಡೌನ್ಗಳಿಂದ ಜನರು ಸಾಕಷ್ಟು ತೊಂದರೆ ಆನುಭವಿಸಿದ್ದು, ಕುಟುಂಬದವರನ್ನು ಕಳೆದುಕೊಂಡಿದ್ದಾರೆ. ಉದ್ಯೋಗ ಇಲ್ಲದಂತಾಗಿತ್ತು. ವ್ಯಾಪಾರ ವ್ಯವಹಾರದಲ್ಲಿ ನಷ್ಟವಾಗಿತ್ತು. ಈಗಷ್ಟೇ ಎಲ್ಲವೂ ಚೇತರಿಕೆಯಾಗುತ್ತಿದೆ. ಈ ಮಧ್ಯೆ ಮತ್ತೆ ಲಾಕ್ಡೌನ್ ಮಾಡಲಾಗುತ್ತದೆ ಎಂಬ ಸುಳ್ಳು ಸುದ್ದಿಯನ್ನು ಹರಡಿ ಅವರನ್ನು ಮತ್ತಷ್ಟು ಆತಂಕದತ್ತ ದೂಡಬಾರದು ಎಂದು ಅವರು ಮನವಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣ ಇರವುದು ಸತ್ಯಸುದ್ದಿಯನ್ನು ವೇಗವಾಗಿ ಹರಡುವುದಕ್ಕೆ. ಆದರೆ, ಕೊರೊನಾ ಲಾಕ್ಡೌನ್ ವಿಷಯದಲ್ಲಿ ಸುಳ್ಳು ಸುದ್ದಿ ಹರಡಲಾಗುತ್ತಿದೆ. ಜನ ಈಗಾಗಲೇ ಸಾಕಷ್ಟು ನೊಂದಿದ್ದಾರೆ. ಅವರನ್ನು ಮತ್ತೆ ಹೆದರಿಸುವ ಕೆಲಸ ಮಾಡಬಾರದು ಎಂದರು.