ಉಡುಪಿ: ಕೃಷ್ಣಪುರ ಮಠದ ಯತಿ ಶ್ರೀ ವಿದ್ಯಾಸಾಗರತೀರ್ಥ ರ ಪರ್ಯಾಯ ಮಹೋತ್ಸವದ ಪೂರ್ವಭಾವಿಯಾಗಿ ಭತ್ತ ಮುಹೂರ್ತವು ಡಿ.೮ ರಂದು ನಡೆಯಲಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದರು
ಸೋಮವಾರ ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವದ ಪೂರ್ವಭಾವಿ ತಯಾರಿ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಅಂದು ಬೆಳಿಗ್ಗೆ ಕಟ್ಟಿಗೆ ರಥಕ್ಕೆ ಶಿಖರವನ್ನು ಇಡುತ್ತಾರೆ. ನಂತರ ದೇವರಿಗೆ ಪ್ರಾರ್ಥನೆ ಸಲ್ಲಿಸಿ, ಚಿನ್ನದ ಪಲ್ಲಕ್ಕಿಯಲ್ಲಿ ಸಿಂಗರಿಸಿದ ಭತ್ತದ ಮುಡಿಯನ್ನಿಟ್ಟು ರಥಬೀದಿಯಲ್ಲಿ ಮೆರವಣಿಗೆಯಲ್ಲಿ ತಂದು ಬಡಗು ಮಾಳಿಗೆಯಲ್ಲಿ ಭತ್ತದ ಮುಡಿಯನ್ನಿಟ್ಟು ಪೂಜೆಯನ್ನು ಸಲ್ಲಿಸಲಾಗುತ್ತದೆ ಎಂದರು
ಜನವರಿ ೧೦ ರಂದು ಜೋಡುಕಟ್ಟೆಯಿಂದ ಪುರಪ್ರವೇಶ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪರ್ಯಾಯ ಮಹೋತ್ಸವದ ಮೆರವಣಿಗೆಯಲ್ಲಿ ಕಲಾ ತಂಡಗಳು ಹಾಗು ಟ್ಯಾಬ್ಯೋ ಗಳು ಭಾಗವಹಿಸಲಿದೆ ಎಂದು ಸಚಿವ ಸುನೀಲ್ ಕುಮಾರ್ ಭರವಸೆ ನೀಡಿದ್ದಾರೆ
ಏಳು ಕೋಟಿ ರೂ ವೆಚ್ಚದಲ್ಲಿ ನಗರಸಭೆಯಿಂದ ಕಾಮಗಾರಿ ನಡೆಯಲಿದೆ. ಮೂರು ಕೋಟಿ ರೂ ಗುಂಡಿ ಮುಚ್ಚಲು ಹಾಗು ೪ ಕೋಟಿ ರೂ ರಸ್ತೆ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತಿದೆ. ನೀತಿ ಸಂಹಿತೆ ಹಿನ್ನೆಲೆ ಟೆಂಡರ್ ಕರೆಯಲು ಚುನಾವಣಾ ಆಯೋಗದಿಂದ ಅನುಮತಿ ಪಡೆದಿದ್ದೇವೆ ಎಂದು ತಿಳಿಸಿದರು
ಸ್ವಚ್ಚತೆಯ ದೃಷ್ಟಿಯಿಂದ ಈಗ ಇರುವ ಪೌರಕಾರ್ಮಿಕರೊಂದಿಗೆ ಹೆಚ್ಚುವರಿ ೭೫ ಜನ ಪೌರ ಕಾರ್ಮಿಕರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗುತ್ತಿದೆ
ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಯವರಿಗೆ ಪೋನ್ ನ ಮೂಲಕ ಸಂಪರ್ಕಿಸಿ ಪರ್ಯಾಯ ಮಹೋತ್ಸವಕ್ಕೆ ಪೂರ್ಣ ಪ್ರಮಾಣದ ಸಹಕಾರ ನೀಡಲು ತಿಳಿಸಿದ್ದಾರೆ. ಜನವರಿ ೧೧ ರಿಂದ ೧೬ ರ ವರೆಗೆ ಹೊರಕಾಣಿಕೆ ಬರಲಿದೆ
ಸುದ್ದಿಗೋಷ್ಠಿಯಲ್ಲಿ ಮಠದ ಕಾರ್ಯ ನಿರ್ವಾಹಕ ಶ್ರೀಶಾ ಆಚಾರ್ಯ, ಪ್ರ.ಕಾರ್ಯದರ್ಶಿ ವಿಷ್ಣು ಪಾಡಿಗಾರ, ಪರ್ಯಾಯ ಸಮಿತಿ ಅಧ್ಯಕ್ಷ ಕೆ. ಸೂರ್ಯನಾರಾಯಣ ಉಪಾಧ್ಯಾಯ, ಕೋಶಾಧಿಕಾರಿ ರವಿಪ್ರಸಾದ್, ಪಿ.ಆರ್.ಓ ಲಕ್ಷ್ಮೀನಾರಾಯಣ ಉಪಸ್ಥಿತರಿದ್ದರು.