ಬೆಂಗಳೂರು: ಕರ್ನಾಟ ರಾಜ್ಯ ಸಹಕಾರ ಪತ್ತಿನ ಸಂಘದ ಸಂಸ್ಥಾಪಕರಾಗಿ, ಶಿಕ್ಷಣ ಸಂಸ್ಥೆ ಸ್ಥಾಪಕರಾಗಿದ್ದ ಬಿ.ಎಲ್. ಲಕ್ಕೇಗೌಡ ಅವರು ಇಂದು ನಿಧನರಾಗಿದ್ದಾರೆ. ವಯೋಸಹಜ ಖಾಯಿಲೆಗಳಿಂದ ಅವರು ಬಳಲುತ್ತಿದ್ದರು ಎನ್ನಲಾಗಿದೆ.
ರಾಜ್ಯದಲ್ಲಿ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜನಪ್ರಿಯರಾಗಿದ್ದರು. ಅವರು ಭಾರತ್ ಕೋ ಆಪರೇಟಿವ್ ಬ್ಯಾಂಕ್ ಸ್ಥಾಪನೆ ಮೂಲಕ ಸಹಕಾರಿ ಧುರೀಣ ಎನಿಸಿಕೊಂಡಿದ್ದವರು. ಬೆಂಗಳೂರಿನಲ್ಲಿ ದಶಕಗಳಿಂದ ಕನ್ನಡಪರ ಚಟುವಟಿಕೆಗಳಲ್ಲಿ ಅವರು ತೊಡಗಿಕೊಂಡಿದ್ದರು.
ಸಹಕಾರಿ ಧುರೀಣ ಬಿಎಲ್ ಲಕ್ಕೇಗೌಡ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.
ದಕ್ಷ ಅಧಿಕಾರಿ, ವಕೀಲರು, ಶಿಕ್ಷಣ ಸಂಸ್ಥೆಗಳ ಸ್ಥಾಪಕರು ಹಾಗೂ ಸಹಕಾರಿ ಧುರೀಣರಾಗಿ ಜನಸೇವೆಯನ್ನೇ ದೈವವೆಂದು ಭಾವಿಸಿ ತಮ್ಮ ಇಡೀ ಬದುಕನ್ನು ಸಮಾಜ ಸೇವೆಗೇ ಮೀಸಲಿಟ್ಟ ಬಿ.ಎಲ್.ಲಕ್ಕೇಗೌಡರ ನಿಧನ ನನಗೆ ತೀವ್ರ ದುಃಖ ಉಂಟು ಮಾಡಿದೆ. ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯರಾಗಿ ಸಮಾಜಕ್ಕೆ ಅವರು ಕೊಟ್ಟ ಕೊಡುಗೆ ಅನನ್ಯ. ಲಕ್ಕೇಗೌಡರ ಅಗಲಿಕೆ ಬಹುದೊಡ್ಡ ನಷ್ಟ. ಆ ಹಿರಿಯ ಚೇತನಕ್ಕೆ ನನ್ನ ಶ್ರದ್ಧಾಪೂರ್ವಕ ಸಂತಾಪಗಳು. ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.