ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಹೆಬ್ರಿ ತಾಲ್ಲೂಕಿನಾದ್ಯಂತ ಅಭಿವೃದ್ಧಿಯ ಹೆಸರಿನಲ್ಲಿ ಕಳಪೆ ಕಾಮಗಾರಿಗಳು ನಡೆಯುತ್ತಿವೆ. ದೀರ್ಘ ಬಾಳಿಕೆಯ ರಸ್ತೆಯನ್ನೇ ನಿರ್ಮಾಣ ಮಾಡಿಲ್ಲ. ಲಕ್ಷಾಂತರ ರೂಪಾಯಿ ಹಣವನ್ನು ದುಂದುವೆಚ್ಚ ಮಾಡುತ್ತಿದ್ದಾರೆ ಎಂದು ಕಾರ್ಳಳ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಕುಚ್ಚೂರು ಶ್ರೀಕಾಂತ್ ಪೂಜಾರಿ ದೂರಿದರು.
ಅವರು ಬುಧವಾರ ಹೆಬ್ರಿಯಲ್ಲಿ ಕಳಪೆ ಕಾಮಗಾರಿಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಹೆಬ್ರಿ ತಾಲ್ಲೂಕು ಕಚೇರಿಯಲ್ಲಿ ಯಾವೂದೇ ಮೂಲ ಸೌಕರ್ಯಗಳು ಇಲ್ಲ. ಅಗತ್ಯ ಸೇವೆಗಳು ದೊರೆಯುತ್ತಿಲ್ಲ. ಹೆಬ್ರಿ ತಾಲ್ಲೂಕು ಆಗಿದ್ದರೂ ಅಗತ್ಯ ಸೇವೆಗಳಿಗೆ ದೂರದ ಕಾರ್ಕಳ ಮತ್ತು ಕುಂದಾಪುರಕ್ಕೆ ಅಲೆದಾಡಬೇಕಿದೆ. ಕೂಡಲೇ ತಾಲ್ಲೂಕು ಕಚೇರಿಯ ಅಗತ್ಯ ಸೇವೆಗಳು ಒಂದೇ ಸೂರಿನಡಿ ದೊರೆಯುವಂತೆ ಕ್ರಮ ಕೈಗೊಳ್ಳಲು ಶ್ರೀಕಾಂತ್ ಪೂಜಾರಿ ಒತ್ತಾಯಿಸಿದರು.
ಹೆಬ್ರಿ ತಾಲ್ಲೂಕಿನ ಸಮುದಾಯ ಆರೋಗ್ಯ ಕೇಂದ್ರ ಅತ್ಯುತ್ತಮ ಕಟ್ಟಡ ಹೊಂದಿದ್ದರೂ ವೈದ್ಯಕೀಯ ಸೌಲಭ್ಯಗಳು ದೊರೆಯುತ್ತಿಲ್ಲ. ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ. ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಉಡುಪಿಗೆ ಹೋಗುವ ಅನಿವಾರ್ಯತೆ ಬಂದಿದೆ, ಹೆಚ್ಚಿನ ಸೌಲಭ್ಯಗಳನ್ನು ನೀಡಿ ಗ್ರಾಮೀಣ ಹೆಬ್ರಿ ತಾಲ್ಲೂಕಿನ ಜನತೆಗೆ ತಮ್ಮೂರಿನಲ್ಲೇ ಸೌಲಭ್ಯಗಳನ್ನು ಒದಗಿಸಿ ಎಂದು ಶ್ರೀಕಾಂತ್ ಪೂಜಾರಿ ಒತ್ತಾಯಿಸಿದರು.
ಹೆಬ್ರಿ ತಾಲ್ಲೂಕು ಆಡಳಿತ ಮತ್ತು ಪೊಲೀಸರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಕುಂದಾಪುರ, ಸುರೇಶ್ ದೇವಾಡಿಗ, ಯುವ ಜೆಡಿಎಸ್ ಅಧ್ಯಕ್ಷ ಸುಜಯ್, ಪ್ರಮುಖರಾದ ಹರೀಶ್ ಮುದ್ರಾಡಿ, ಶಂಕರ ಪೂಜಾರಿ, ಹರ್ಷಿದ್ ಬಜಗೋಳಿ, ಪವನ್ ರಾಜ್, ವರುಣ್ ಕುಮಾರ್, ಬಾಬಣ್ಣ, ರಿಯಾಜ್ ಕಾರ್ಕಳ, ಕೃಷ್ಣಯ್ಯ ಶೆಟ್ಟಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.