ವರದಿ : ಶ್ರೀದತ್ತ ಹೆಬ್ರಿ
ಮುದ್ರಾಡಿ ನಾಟ್ಕದೂರು : ಮಕ್ಕಳಲ್ಲಿ ನಾವು ಸೌಮ್ಯ ಗುಣದಲ್ಲಿ ಮಾತನಾಡಿಸಿ ಶಿಕ್ಷಣದ ಜೊತೆಗೆ ಧರ್ಮ ಸಂಸ್ಕೃತಿಯ ಅರಿವು ಮೂಡಿಸಬೇಕು, ನಮ್ಮ ಮನೆಯ ಶುಭ ಸಂಭ್ರಮಗಳಲ್ಲಿ ಡಿಜೆ ಸಂಸ್ಕೃತಿಯನ್ನು ದೂರಮಾಡಿ ಭಜನೆ ಸಂಸ್ಕೃತಿಯನ್ನು ಆರಂಭಿಸಿದಾಗ ಉಳಿದವರು ಪ್ರೇರಣೆಯಾಗಿ ಎಲ್ಲರೂ ಈ ಕಾರ್ಯ ಮಾಡಿದಾಗ ಮುಂದೆ ಧರ್ಮ ಸಂಸ್ಕೃತಿ ಉಳಿಯುತ್ತದೆ, ನಾವು ಅನ್ಯ ಧರ್ಮ ಅನ್ಯ ಧರ್ಮ ಎಂಬ ನಿಂದನೆಯಿಂದ ದೂರವಿರುವ, ಎಲ್ಲಾ ಧರ್ಮದ ಸಾರವೂ ಒಂದೇ, ನಮಗೆ ಕ್ಷಣಿಕ ಸುಖ ಆಸೆಗೆ ಸ್ವಧರ್ಮ ಬಿಟ್ಟು ಅನ್ಯ ಧರ್ಮದ ಜೀವನ ಬೇಡ ಎಂದು ಕೇರಳ ವರ್ಕಳ ಶಿವಗಿರಿ ಮಠದ ಸತ್ಯಾನಂದ ತೀರ್ಥ ಸ್ವಾಮೀಜಿ ಹೇಳಿದರು.
ಅವರು ಮುದ್ರಾಡಿ ನಾಟ್ಕದೂರು ಅಭಯಹಸ್ತೆ ಆದಿಶಕ್ತಿ ಅಮ್ಮನವರ ನೂತನ ಶಿಲಾಮಯ ದೇವಸ್ಥಾನದ ಪುನರ್ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಂಪನ್ನ ಕಾರ್ಯಕ್ರಮದ ಪ್ರಯುಕ್ತ ಶುಕ್ರವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಮುದ್ರಾಡಿ ಅಭಯಹಸ್ತೆ ಆದಿಶಕ್ತಿ ಅಮ್ಮನವರ ಕ್ಷೇತ್ರವು ತಪಸ್ಸಿನ ಫಲ, ಪುಣ್ಯ ಮತ್ತು ಕಾರಣೀಕ ಕ್ಷೇತ್ರವಾದ್ದರಿಂದಲೇ ಕೊರೋನ ಸಂಕಷ್ಟದ ಕಾಲದಲ್ಲೂ ನೂತನ ಶಿಲಾಮಯ ದೇವಸ್ಥಾನದ ಪುನರ್ ಸಾಧ್ಯವಾಗಿದೆ, ಮುದ್ರಾಡಿ ಕ್ಷೇತ್ರ ನಾಡಿನ ಭಕ್ತಿ ವೈಭವದ ಪುಣ್ಯ ನೆಲ, ಧರ್ಮದ ಮೂಲಕ ಕಲೆ ಸಂಸ್ಕೃತಿಯನ್ನು ಉಳಿಸುವ ಮಹಾಕಾರ್ಯ ಇಲ್ಲಿ ನಿರಂತರವಾಗಿ ನಡೆಯುತ್ತಿದೆ ಎಂದು ಸತ್ಯಾನಂದ ತೀರ್ಥ ಸ್ವಾಮೀಜಿ ಹೇಳಿದರು.
ಮನಸ್ಸು ತುಂಬಿ ಬಂದಿದೆ : ರವೀಂದ್ರ ಶೆಟ್ಟಿ.
ಅಭಯಹಸ್ತೆ ಆದಿಶಕ್ತಿ ದೂರದ ನನ್ನನ್ನು ಕರೆಸಿ ಬ್ರಹ್ಮಕಲಶೋತ್ಸವದಲ್ಲಿ ಸೇವೆ ಮಾಡಿಸಿಕೊಂಡಿದ್ದಾಳೆ, ಸಮಾಜದ ಕೆಲಸದ ಜೊತೆಗೆ ಧರ್ಮದ ಕೆಲಸದ ಮಾಡುವ ನನ್ನ ಹಂಬಲಕ್ಕೆ ತಾಯಿ ಹರಸಿದ್ದಾಳೆ, ಎಲ್ಲರ ಸಹಕಾರದಿಂದ ಎಲ್ಲವೂ ಸಾಧ್ಯವಾಗಿದೆ, ಧರ್ಮದರ್ಶಿ ಮೋಹನ ಸ್ವಾಮೀಜಿಯವರ ಋಣವನ್ನು ಮಕ್ಕಳು ತೀರಿಸಿ ಕಾರಣೀಕ ಕ್ಷೇತ್ರವನ್ನು ನಾಡಿಗೆ ಸಮರ್ಪಿಸಿದ್ದಾರೆ. ನನಗೆ ಮನಸ್ಸು ತುಂಬಿ ಬಂದಿದೆ. ಮುಂದೆ ಆದಿಶಕ್ತಿ ಕ್ಷೇತ್ರ ಪ್ರವಾಸೋದ್ಯಮ ತಾಣವೂ ಆಗಲಿದೆ ಎಂದು ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷ ಬಜಗೋಳಿ ರವೀಂದ್ರ ಶೆಟ್ಟಿ ಹೇಳಿದರು.
ಸುಕುಮಾರ್ ಮೋಹನ್ ಗೆ ಪಟ್ಟಾಭಿಷೇಕ :
ಧರ್ಮದರ್ಶಿ ಮೋಹನ ಸ್ವಾಮೀಜಿಯವರ ಕಾಲಾ ನಂತರ ಕ್ಷೇತ್ರವನ್ನು ಎಲ್ಲರ ಜೊತೆಗೂಡಿ ಮುನ್ನಡೆಸಿಕೊಂಡು ಹೋಗುತ್ತಿರುವ ಸುಕುಮಾರ್ ಮೋಹನ್ ಅವರಿಗೆ ಬ್ರಹ್ಮಕಲಶದ ಬಳಿಕ ನಡೆಯುವ ದೃಢ ಕಲಶದ ದಿನ ಪಟ್ಟಾಭಿಷೇಕ ಸಂಭ್ರಮ ನಡೆಯಲಿದೆ ಎಂದು ಬಜಗೋಳಿ ರವೀಂದ್ರ ಶೆಟ್ಟಿ ತಿಳಿಸಿದರು.
ಬ್ರಹ್ಮಕಶೋತ್ಸವದ ಯಶಸ್ವಿಗೆ ದುಡಿದ ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಯಶಸ್ವಿಗಾಗಿ ಸೇವೆಸಲ್ಲಿಸಿದ ಬಜಗೋಳಿ ರವೀಂದ್ರ ಶೆಟ್ಟಿ ದಂಪತಿ, ಮುದ್ರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಹೆಗ್ಡೆ, ನವೀನ್ ಕೋಟ್ಯಾನ್, ರಮೇಶ್ ಕುಮಾರ್ ಶಿವಪುರ, ಹರಿದಾಸ ಹೆಬ್ರಿ ಟಿಜಿ.ಆಚಾರ್ಯ, ಹೆಬ್ರಿ ಶಂಕರ ಶೇರಿಗಾರ್, ಉಜೂರು ಇಂದಿರಾ ಹೆಗ್ಡೆ,ಕರುಣಾಕರ ನೆಲ್ಲಿಕಟ್ಟೆ,ರವಿರಾಜ ಜೈನ್, ಪತ್ರಕರ್ತೆ ಸುಮಲತಾ ಬಾಲಚಂದ್ರ ಹೆಬ್ಬಾರ್, ಸಿಎ ಜೀವನ್ ಶೆಟ್ಟಿ ಹೇರೂರು, ಉಮೇಶ್ ಕುಕ್ಕುಂದೂರು, ಸಂದೇಶ ಕೋಟ್ಯಾನ್, ನರೇಶ್, ದಿವ್ಯಾ, ಪ್ರಕಾಶ ಭಂಡಾರಿ, ಸುಮಾಲತಾ, ಶ್ವೇತಾ, ಸಂದೇಶ ಭಂಡಾರಿ ಸಹಿತ ಸ್ವಯಂಸೇವಕರು ಮತ್ತು ಹಲವಾರು ಮಂದಿ ದಾನಿಗಳನ್ನು ಸನ್ಮಾನಿಸಲಾಯಿತು.
ಅಭಯಹಸ್ತೆ ಆದಿಶಕ್ತಿ ಅಮ್ಮನವರ ದೇವಸ್ಥಾನದ ಆಡಳಿತ ಮೋಕ್ತೇಸರ ಸುಕುಮಾರ್ ಮೋಹನ್ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಪೂನಾ ಬಿಲ್ಲವ ಸಂಘದ ಅಧ್ಯಕ್ಷ ಕಡ್ತಲ ವಿಶ್ವನಾಥ ಪೂಜಾರಿ, ವಕೀಲ ಕಾರ್ಕಳ ರಮಣಾಚಾರ್ಯ, ವಾಸ್ತುತಜ್ಞ ಪ್ರಮಲ್ ಕುಮಾರ್ ಕಾರ್ಕಳ, ಹೆಬ್ರಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ ಪೂಜಾರಿ ಶಿವಪುರ, ಸೂರತ್ ಉದ್ಯಮಿ ಮುದ್ರಾಡಿ ಮನೋಜ್ ಸಿ ಪೂಜಾರಿ, ರಂಗ ನಿರ್ದೇಶಕ ಉದ್ಯಾವರ ನಾಗೇಶ್ ಕುಮಾರ್, ಉದ್ಯಮಿ ಮಂಜುನಾಥ್ ಕಾಡುಹೊಳೆ, ನಿವೃತ್ತ ದೈಹಿಕ ಶಿಕ್ಷಣ ಅಧೀಕ್ಷಕ ಸೀತಾನದಿ ವಿಠ್ಠಲ ಶೆಟ್ಟಿ, ಕಾರ್ಕಳ ತಾಲ್ಲೂಕು ಮಂಜುನಾಥೇಶ್ವರ ಭಜನಾ ಪರಿಷತ್ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಸಮಿತಿಯ ಕಾರ್ಯದರ್ಶಿ ಗಣಪತಿ ಎಂ, ಸಹ ಕಾರ್ಯದರ್ಶಿ ನವೀನ್ಕೋಟ್ಯಾನ್, ಕ್ಷೇತ್ರದ ಮಾತೆ ಕಮಲಾ ಮೋಹನ್, ಸುಧೀಂದ್ರ ಮೋಹನ್, ಸುರೇಂದ್ರ ಮೋಹನ್, ಉಮೇಶ್ಕಲ್ಮಾಡಿ, ವಿವಿಧ ಸಮಿತಿಗಳ ಪ್ರಮುಖರು, ಗಣ್ಯರು, ಜನಪ್ರತಿನಿಧಿಗಳು, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.
ಸುಕುಮಾರ್ ಮೋಹನ್ ಸ್ವಾಗತಿಸಿ ಸತೀಶ್ ಹೊಸ್ಮಾರು ನಿರೂಪಿಸಿದರು.