ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ವರದಕ್ಷಿಣೆ ಕಿರುಕುಳ ಸಂಬಂಧಿಸಿದಂತೆ ಸಿಗರೇಟಿನಿಂದ ಸುಟ್ಟು ಗರ್ಭಿಣಿ ಪತ್ನಿಗೆ ಚಿತ್ರಹಿಂಸೆ ನೀಡಿದ ಪತಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಕುಂದಾಪುರದ ಬರೆಕಟ್ಟು ನಿವಾಸಿ ಪ್ರದೀಪ್ ಬಂಧಿತ.
ಕಳೆದ ವರ್ಷ ಅಕ್ಟೋಬರ್ ನಲ್ಲಿ ಪ್ರಿಯಾಂಕಾ – ಪ್ರದೀಪ್ ಪ್ರೇಮ ವಿವಾಹವಾಗಿದ್ದರು. ಮದುವೆಯಾದ ನಾಲ್ಕೈದು ತಿಂಗಳಲ್ಲಿ ಪ್ರದೀಪ್, ಪ್ರಿಯಾಂಕಾಗೆ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ.
ಇದೀಗ ಆತನ ಕುಕೃತ್ಯದ ವೀಡಿಯೋ ವೈರಲ್ ಆಗಿದೆ. ಅದರಲ್ಲಿ ಪ್ರದೀಪ್ ತನ್ನ ಪತ್ನಿ ಪ್ರಿಯಾಂಕಾಗೆ ಸಿಗರೇಟಿನಿಂದ ಮುಖಕ್ಕೆ ಸುಟ್ಟು ಚಿತ್ರಹಿಂಸೆ ನೀಡುವ ದೃಶ್ಯವಿದೆ. ಪತ್ನಿ ಪ್ರಿಯಾಂಕ ಕೈಮುಗಿದು ಬೇಡುವೆ ಸುಡಬೇಡಿ ಎಂದು ಪರಿಪರಿಯಾಗಿ ಬೇಡಿಕೊಂಡರೂ, ಕಾಲಿಗೆ ಬೀಳುತ್ತೇನೆಂದರು ಪ್ರದೀಪ್ ತನ್ನ ರಾಕ್ಷಸ ವರ್ತನೆಯನ್ನು ಮುಂದುವರೆಸಿದ್ದಾನೆ.
ಸಿಗರೇಟಿನಿಂದ ಸುಟ್ಟು ಗಾಯ ಮಾಡಿದ ಬಳಿಕ ಮಗುವನ್ನು ಕೊಲ್ಲುವುದಾಗಿ ಹೇಳಿ ಹೊಟ್ಟೆಗೆ ತುಳಿದಿದ್ದಾನೆ. ಈ ವೇಳೆಯಲ್ಲಿ ಪ್ರಿಯಾಂಕ ತಪ್ಪಿಸಿಕೊಂಡ ಪರಿಣಾಮ ಸೊಂಟಕ್ಕೆ ಪೆಟ್ಟು ತಗುಲಿದೆ.
ಆರೋಪಿ ಪ್ರದೀಪನೇ ತಾನು ಮಾಡಿದ ಕೃತ್ಯವನ್ನು ತನ್ನ ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಿಸಿ ಪ್ರಿಯಾಂಕ ಅವರ ಪೋಷಕರಿಗೆ ಕಳುಹಿಸಿ 2ಲ್ಷಕ ರೂ ಹಣ ಹಾಗೂ 4 ಪವನ್ ಚಿನ್ನವನ್ನು ವರದಕ್ಷಿಣೆ ರೂಪದಲ್ಲಿ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾನೆ. ಒಂದು ವೇಳೆ ಹಣ ಮತ್ತು ಚಿನ್ನ ನೀಡದೇ ಇದ್ದಲ್ಲಿ ಪ್ರಿಯಾಂಕಾ ಅವರನ್ನು ಕೊಂದುಬಿಡುವುದಾಗಿ ಹೇಳಿ ಕೊಲೆ ಬೆದರಿಕೆಯೊಡ್ಡಿದ್ದಾನೆ ಎಂದು ಪ್ರಿಯಾಂಕ ಕುಂದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.