ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಆದಿಶಕ್ತಿಯ ಸಾನಿಧ್ಯಕ್ಕೆ ಅನಂತವಾದ ಚೈತನ್ಯತುಂಬಿದ ಕೀರ್ತಿಶೇಷರಾದ ಧರ್ಮಯೋಗಿ ಮೋಹನ್ ಸ್ವಾಮೀಜಿ ಅವರ ಉತ್ತರಾಧಿಕಾರಿಯಾಗಿ ಸುಪುತ್ರರಾದ ಸುಕುಮಾರ್ ಮೋಹನ್ ಅವರಿಗೆ ಪಟ್ಟಾಭಿಷೇಕವಾಗಿದೆ. ತಾಯಿಗೆ ಹೇಗೆಬೇಕೋ ಹಾಗೇಯೇ ಅವಳು ಮಾಡಿಸಿಕೊಂಡಿದ್ದಾಳೆ. ಮಹಾತಾಯಿಯ ಕೃಪೆ ನಮ್ಮೆಲ್ಲರ ಮೇಲೆ ಇದ್ದುದರಿಂದಲೇ ಇದೆಲ್ಲ ಸಾಧ್ಯವಾಗಿದೆ. ಸಮಾಜಕ್ಕೆ ಬೆಳಕು ನೀಡುವ, ಸಾನಿದ್ಯ ಬೆಳಗಿಸುವ ಕಾರ್ಯ ಪೀಠಾಧಿಪತಿ ಸುಕುಮಾರ್ ಮೋಹನ್ ಅವರಿಂದ ಆಗಲಿ, ಧರ್ಮಾತ್ಮರಾದ ಮೋಹನ ಸ್ವಾಮೀಜಿ ಅವರಿಂದ ಬೆಳಗಿದ ಕ್ಷೇತ್ರ ಇನ್ನಷ್ಟು ಬೆಳಗಲಿ, ಮಣ್ಣಿಗೆ ಭಕ್ತರಿಗೆ ಚೈತನ್ಯ ದೊರೆಯಲಿ, ಸಾನಿಧ್ಯ ಬೆಳಗಲಿ ಮಂಗಳೂರು ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಅವರು ಹೆಬ್ರಿ ಸಮೀಪದ ಮುದ್ರಾಡಿ ನಾಟ್ಕದೂರು ಅಭಯಹಸ್ತೆ ಆದಿಶಕ್ತಿ ದೇವಸ್ಥಾನದ ದೃಢ ಕಲಶ ಮತ್ತು ಆಡಳಿತ ಮೋಕ್ತೇಸರ ಸುಕುಮಾರ್ ಮೋಹನ್ ಅವರ ಪಟ್ಟಾಭಿಷೇಕ ಮಹೋತ್ಸವದಲ್ಲಿ ಶುಕ್ರವಾರ ಆಶೀರ್ವಚನ ನೀಡಿದರು.
ವರ್ಕಳ ಶ್ರೀ ಮಠದ ಸತ್ಯಾನಂದತೀರ್ಥ ಸ್ವಾಮೀಜಿ ಅನ್ಯೋನ್ಯತೆಗೆ ಹೆಸರಾದ ಅನುಷ್ಠಾನ ಶಕ್ತಿಯ ಮೋಹನ ಸ್ವಾಮೀಜಿ ಅವರ ಧರ್ಮನಿಷ್ಠೆಯ ದೇವಿಯ ಕ್ಷೇತ್ರ ಸುಕುಮಾರ್ ಮೋಹನ್ ಅವರಿಂದ ಬೆಳಗಲಿ ಎಂದು ಶುಭಾಶೀರ್ವಾದ ಸಲ್ಲಿಸಿದರು. ಮಾಣಿಲ ಶ್ರೀ ಧಾಮಮಹಾಲಕ್ಷ್ಮಿ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು.
ಆದಿಶಕ್ತಿ ಕ್ಷೇತ್ರದ ಬ್ರಹ್ಮಕಲಶೋತ್ಸವದ ಹೊಣೆಹೊತ್ತು ಯಶಸ್ವಿಗೊಳಿಸಿದ ದೃಡಕಲಶ ಪಟ್ಟಾಭಿಷೇಕ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಬಜಗೋಳಿ ಮಾತನಾಡಿ ಮೋಹನ ಸ್ವಾಮೀಜಿಯವರ ತಪೋಭೂಮಿಯ ಪುಣ್ಯಕ್ಷೇತ್ರದಲ್ಲಿ ಉತ್ತರಾಧಿಕಾರಿಯಾಗಿ ಸುಕುಮಾರ್ ಮೋಹನ್ ಅವರಿಗೆ ಎಲ್ಲರೂ ಸೇರಿ ಪಟ್ಟಾಭಿಷೇಕ ಮಾಡಲಾಗಿದೆ, ಸುಕುಮಾರ್ ಮೋಹನ್ ಮೂಲಕ ಕ್ಷೇತ್ರ ಬೆಳಗಲಿ, ಕ್ಷೇತ್ರದಿಂದ ನಾಡಿಗೆ ಒಳಿತಾಗಲಿ, ಎಲ್ಲ ಕೆಲಸಗಳು ಯಶಸ್ವಿಯಾಗಿ ನೆರವೇರಲು ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.
ಚಿಕ್ಕಮಗಳೂರಿನ ಕೆ.ಎಸ್.ನಿತ್ಯಾನಂದ ಸ್ವಾಮೀಜಿ ನೇತ್ರತ್ವದಲ್ಲಿ ಜೀರ್ಣೋದ್ಧಾರ ಬ್ರಹ್ಮಕಲಶದ ಬಳಿಕ ನಡೆಯುವ ದೃಡಕಲಶ ಮತ್ತು ಸುಕುಮಾರ್ ಮೋಹನ್ ಅವರ ಪಟ್ಟಾಭಿಷೇಕದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.
ಹೊರಾಂಗಣದ ಬಲಿಕಲ್ಲು ಪ್ರತಿಷ್ಠೆ, ಪರಿವಾರ ದೇವತೆಗಳ ಪ್ರತಿಷ್ಠೆ ನಡೆಯಿತು. ಹಿರಿಯರಾದ ವರಂಗ ವಿಠ್ಠಲ ಪೂಜಾರಿ, ಕಂದಿರು ಕ್ಷೇತ್ರದ ಧರ್ಮದರ್ಶಿ ಸೋಮನಾಥ ಶಾಂತಿ, ಸೋಮೇಶ್ವರ ವೆಂಕಟರಮಣ ದೇವಸ್ಥಾನದ ಆಡಳಿತ ಮೋಕ್ತೇಸರ ಹೆಬ್ರಿ ಯೋಗೀಶ್ ಭಟ್, ಬೆಂಗಳೂರಿನ ರಂಗ ನಿರ್ದೇಶಕ ಜಗದೀಶ ಜಾಲ. ಸೀತಾನದಿ ಸೌಖ್ಯಯೋಗ ಟ್ರಸ್ಟ್ ಸಂಸ್ಥಾಪಕ ಸೀತಾನದಿ ವಿಠ್ಠಲ ಶೆಟ್ಟಿ, ರವಿರಾಜ್ ಜೈನ್, ಸುಂದರ ಕುಮಾರ್ ಮುಂಬೈ, ಬೇಳಂಜೆ ಪಾಂಡುರಂಗ ಪೂಜಾರಿ ಸೇರಿದಂತೆ ಗಣ್ಯರು, ಆದಿಶಕ್ತಿ ಕ್ಷೇತ್ರದ
ಕಮಲಾ ಮೋಹನ್, ಸುಧೀಂದ್ರ ಮೋಹನ್, ಸುರೇಂದ್ರ ಮೋಹನ್, ಉಮೇಶ್ ಕಲ್ಮಾಡಿ ಉಪಸ್ಥಿತರಿದ್ದರು.