ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಬಡ ಮಕ್ಕಳಿಗಾಗಿ ಇರುವ ಹೆಬ್ರಿಯ ಆಶ್ರಮ ಶಾಲೆ ಇಂದು ಅವ್ಯವಸ್ಥೆಯ ಆಗರವಾಗಿದೆ. ಶನಿವಾರ ಹೆಬ್ರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ, ಮಾಜಿ ಅಧ್ಯಕ್ಷ ಎಚ್ ಕೆ ಸುಧಾಕರ್ ಹಾಲಿ ಸದಸ್ಯ ಸುಧಾಕರ ಹೆಗ್ಡೆ , ಹೆಬ್ರಿ ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ರಮೇಶ್ ಕುಮಾರ್ ಶಿವಪುರ ಇವರು ಆಶ್ರಮ ಶಾಲೆಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಬಗ್ಗೆ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು ಐವತ್ತು ಮಕ್ಕಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಹೊರ ಜಿಲ್ಲೆಗಳಾದ ರಾಯಚೂರು ಕೊಪ್ಪಳ ಹೀಗೆ ದೂರದ ಊರಿನಿಂದ ಉಡುಪಿ ಜಿಲ್ಲೆ ಸಿಗುವ ಉತ್ತಮ ಶಿಕ್ಷಣಕ್ಕಾಗಿ ತಮ್ಮ ಸಣ್ಣ ಮಕ್ಕಳನ್ನು ಇಲ್ಲಿ ಸೇರಿಸಿದ್ದಾರೆ. ಆದರೆ ಇಲ್ಲಿ ಮಕ್ಕಳಿಗೆ ಸರಿಯಾದ ವ್ಯವಸ್ಥೆಯಿಲ್ಲ. ಆಶ್ರಮ ಶಾಲೆಯಲ್ಲಿದ್ದ ಮೆನು ಚಾರ್ಟ್ ಪ್ರಕಾರ ಇಂದು ಬೆಳಿಗ್ಗೆ ಮಕ್ಕಳಿಗೆ ದೋಸೆ ಆಲೂಗಡ್ಡೆ ಪಲ್ಯ ಮಾಡಬೇಕಿತ್ತು.
ಆದರೆ ಕಳೆದ 3, 4 ದಿನಗಳಿಂದ ಚಿತ್ರಾನ್ನ ಮಾಡಿ ಮಕ್ಕಳಿಗೆ ಬಡಿಸುತ್ತಿದ್ದಾರೆ. ಅದು ಹಳಸಲು ಚಿತ್ರಾನ್ನ ಈ ಬಗ್ಗೆ ವಾರ್ಡನ್ ನನ್ನು ಕೇಳಿದಾಗ ಆಹಾರ ಪದಾರ್ಥಗಳು ಖಾಲಿಯಾಗಿವೆ ಬರಲಿಲ್ಲ ಎಂದು ಉತ್ತರ ನೀಡುತ್ತಾರೆ. ಇದಕ್ಕೆ ಒಪ್ಪದ ಜನಪ್ರತಿನಿಧಿಗಳು, ಇನ್ನೂ 1 ವಾರ ಸಮಯ ನಿಮಗೆ ನೀಡುತ್ತೇವೆ. ಪುನಃ ಇದೇ ರೀತಿ ತಪ್ಪು ನಡೆದರೆ ನಿಮ್ಮ ಮೇಲೆ ಶಿಸ್ತು ಬದ್ಧ ಕ್ರಮ ಕೈಗೊಳ್ಳುತ್ತೇವೆ. ಎಂದರು.
ಅದೂ ಅಲ್ಲದೆ ರಾಯಚೂರಿನ ಬಂದ ಮೂರನೇ ತರಗತಿ ವಿದ್ಯಾರ್ಥಿಗೆ ಆರೋಗ್ಯ ಸರಿಯಿಲ್ಲದ ಕಾರಣ ಆತನ ಹೆತ್ತವರು ಇಲ್ಲಿಗೆ ಬಂದು ಮಗನನ್ನು ವಾಪಸ್ಸು ಮನೆಗೆ ಕರೆದುಕೊಂಡು ಹೋಗುತ್ತೇವೆ ಎಂದಾಗ ವಾರ್ಡನ್ 500 ದಂಡ ವಿಧಿಸಿದ್ದಾರೆ. ಇದು ಯಾವ ನ್ಯಾಯ? ಎಂದು ಹೆತ್ತವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಬಡ ಮಕ್ಕಳಿಗೆ ಆಗಿರುವ ಸರ್ಕಾರಿ ಆಶ್ರಮ ಶಾಲೆ ಮುಂದಿನ ದಿನಗಳಲ್ಲಿ ಆದರೂ ಸರಿ ಹೋಗುತ್ತದೆಯೇ ಎನ್ನುವುದು ಯಕ್ಷಪ್ರಶ್ನೆಯಾಗಿದೆ.