ವಾರಣಾಸಿ: ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದ ವಿಡಿಯೋ ಸಮೀಕ್ಷೆಗೆ ಆದೇಶಿಸಿರುವ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರಿಗೆ ಜೀವ ಬೆದರಿಕೆ ಪತ್ರ ಬಂದಿದ್ದು, ಈ ಬಗ್ಗೆ ನ್ಯಾಯಾಧೀಶರು ಯುಪಿ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ), ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಮತ್ತು ವಾರಣಾಸಿ ಪೊಲೀಸ್ ಕಮಿಷನರೇಟ್ಗೆ ಬರೆದ ಪತ್ರದಲ್ಲಿ, ದಿವಾಕರ್ ಅವರು ಇಸ್ಲಾಮಿಕ್ ಆಗಾಜ್ ಚಳವಳಿಯ ಪರವಾಗಿ ಕಾಶಿಫ್ ಅಹ್ಮದ್ ಸಿದ್ದಿಕಿ ಅವರು ಬರೆದಿರುವ ಪತ್ರವನ್ನು ನೋಂದಾಯಿತ ಅಂಚೆ ಮೂಲಕ ಸ್ವೀಕರಿಸಿದ್ದಾರೆ ಎಂದು ತಿಳಿದುಬಂದಿದೆ.
ನ್ಯಾಯಾಧೀಶರ ಭದ್ರತೆಗಾಗಿ ಒಟ್ಟು ಒಂಬತ್ತು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎನ್ನಲಾಗಿದೆ.
ನ್ಯಾಯಾಧೀಶರಿಗೆ ಬರೆದ ಪತ್ರದಲ್ಲಿ, “ಜ್ಞಾನವಾಪಿ ಮಸೀದಿ ಸಂಕೀರ್ಣವನ್ನು ಪರಿಶೀಲಿಸುವುದು ಸಾಮಾನ್ಯ ಪ್ರಕ್ರಿಯೆ ಎಂದು ನೀವು ಹೇಳಿಕೆ ನೀಡಿದ್ದೀರಿ, ನೀವು ಮೂರ್ತಿಪೂಜೆ ಮಾಡುವವರು, ನೀವು ಮಸೀದಿಯನ್ನು ಮಂದಿರವೆಂದು ಘೋಷಿಸುತ್ತೀರಿ, ನಿಮ್ಮಿಂದ ಯಾವುದೇ ಮುಸಲ್ಮಾನ ಈಗ ಸರಿಯಾದ ನಿರ್ಧಾರವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ‘ಕಾಫಿರ್, ಮೂರ್ತಿಪೂಜಕ್’ ಹಿಂದೂ ನ್ಯಾಯಾಧೀಶರು. ಎಂದು ಪತ್ರದಲ್ಲಿ ಬರೆಯಲಾಗಿದೆ.
ಏಪ್ರಿಲ್ 26 ರಂದು, ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ದಿವಾಕರ್ ಅವರು ಜ್ಞಾನವಾಪಿ ಸಂಕೀರ್ಣದ ವೀಡಿಯೊಗ್ರಫಿ ಸಮೀಕ್ಷೆಗೆ ಆದೇಶಿಸಿದ್ದರು. ಸಮೀಕ್ಷೆಯ ವರದಿಯನ್ನು ಮೇ 19ರಂದು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.