ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಬಂಟರ ಯಾನೆ ನಾಡವರ ಸಂಘ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶನಿವಾರ ಬಂಟರಭವನದಲ್ಲಿ ಜರುಗಿತು.
ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅವರು ಈ ಸಂದರ್ಭ ಮಾತನಾಡಿ, ಬಂಟರು ಎಲ್ಲರೂ ನಾನೇ ನಾಯಕ ಎನ್ನುವ ಮನೋಭಾವ ಬಿಡಬೇಕು. ಸಮಾಜದಲ್ಲಿ ಇಂದಿಗೂ ಕೂಡಾ ಹೊಟ್ಟೆ ಬಟ್ಟೆ ಶಿಕ್ಷಣ ವಸತಿಗೆ ಕಷ್ಟ ಪಡುವ ಅದೆಷ್ಟೋ ಜನರು ನಮ್ಮ ಮುಂದೆ ಇದ್ದಾರೆ. ಇದ್ದವರಿಂದ ಇಲ್ಲದವರಿಗೆ ನೀಡುವುದೆ ಸಂಘಗಳ ಕೆಲಸ. ನಮ್ಮ ಬಲಹೀನತೆಯಿಂದ ಇದೀಗ ಗಡಿನಾಡ ಗಾಂಧಿ ಎಂದೆ ಕರೆಯಲ್ಪಡುವ ಕೈಯಾರ ಕಿಞ್ಞಣ್ಣ ರೈಯವರನ್ನು ಪಠ್ಯ ಪುಸ್ತಕದಲ್ಲಿ ಬೇಕಾದ ಕಡೆ ಹಾಕದೆ ಬೇಡದಲ್ಲಿ ಹಾಕಲಾಗಿದೆ. ನಾಯಕತ್ವದ ಗುಣ ಇರುವ ಬಂಟರನ್ನು ಗ್ರಾಮಿಣ ಭಾಗದ ಗರಡಿ ಸೇರಿದಂತೆ ಅನೇಕ ಕಡೆಯಲ್ಲಿ ತುಳಿಯುವ ಕಾರ್ಯ ಆಗುತ್ತಿದೆ. ಇದೆಲ್ಲದಕ್ಕೂ ನಮ್ಮಲ್ಲಿನ ಸಂಘಟನೆಯ ಕೊರತೆ ಕಾರಣ. ಜಿಲ್ಲೆಯಲ್ಲಿ ಅತೀ ಹೆಚ್ಚು ಜನಸಂಖ್ಯೆ ಮತ್ತು ಪ್ರಭಾವ ಇರುವ ಬ್ರಹ್ಮಾವರ ಬಂಟರ ಸಂಘ ಜಿಲ್ಲೆಗೆ ಮಾದರಿ ಸಂಘ ಆಗಬೇಕು ಎಂದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಶುಭಾಶಂಸನೆ ಗೈದರು.
ಬ್ರಹ್ಮಾವರ ಬಂಟರ ಯಾನೆ ನಾಡವರ ಸಂಘದ ನೂಥನ ಅಧ್ಯಕ್ಷ ಮೈರ್ಮಾಡಿ ಸುಧಾಕರ ಶೆಟ್ಟಿಯವರಿಗೆ ಪದಪ್ರದಾನ ಮಾಡಲಾಯಿತು ಮತ್ತು ಎಲ್ಲಾ ಪದಾಧಿಕಾರಿಗಳನ್ನು ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮತ್ತು ಹುಬ್ಬಳ್ಳಿ ಧಾರವಾಡಾ ಬಂಟರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಸುಗ್ಗಿ ಸುಧಾಕರ ಶೆಟ್ಟಿಯವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಬಂಟರ ಸಂಘ ಬೆಳಗಾಂ ಇದರ ಮಾಜಿ ಅಧ್ಯಕ್ಷ ವಿಠಲ್ ಹೆಗ್ಡೆ , ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ , ಲೆಕ್ಕ ಪರಿಶೋಧಕರಾದ ಬೆಂಗಳೂರಿನ ಆರೂರು ನಾರಾಯಣ ಶೆಟ್ಟಿ, ಉಡುಪಿ ಸರಕಾರಿ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ.ನಿಕೇತನ, ಬ್ರಹ್ಮಾವರ ಬಂಟರ ಸಂಘದ ಮಾಜಿ ಅಧ್ಯಕ್ಷ ರಾಜಾರಾಮ ಶೆಟ್ಟಿ , ಮಾತೃ ಸಂಘದ ಸದಸ್ಯ ಬಾಲಕೃಷ್ಣ ಹೆಗ್ಡೆ ಕೊಕ್ಕರ್ಣೆ , ಸಂಘದ ಕಾರ್ಯದರ್ಶಿ ಬೈಕಾಡಿ ಸುಪ್ರಸಾದ್ ಶೆಟ್ಟಿ, ಖಜಾಂಚಿ ಮಹೇಶ್ ಶೆಟ್ಟಿ ಮತ್ತು ನಾನಾ ಭಾಗದ ಬಂಟ ಸಂಘದ ಪಧಾಧಿಕಾರಿಗಳು ಉಪಸ್ಥಿತರಿದ್ದರು.
ವೇದಿಕೆ ಎದುರು ಭಾಗದಲ್ಲಿ ಕೃಷಿ ಸಂಸ್ಕೃತಿಯನ್ನು ಬಿಂಬಿಸುವ ಪರಿಕರಗಳನ್ನು ಇರಿಸಲಾಗಿತ್ತು
ಕಾರ್ಯಕ್ರಮದ ಬಳಿಕ ಬಂಟ ಸಂಘದ ಸದಸ್ಯರಿಂದ ಯಕ್ಷಗಾನ ಭೀಷ್ಮ ವಿಜಯ ಯಕ್ಷಗಾನ ಜರುಗಿತು.