ಉಡುಪಿ : ಹಲ್ಲೆ ನಡೆಸಿದ ಆರೋಪಿಗೆ ನಗರದ ಹೆಚ್ಚುವರಿ ಸಿ.ಜೆ ಮತ್ತು ಎ.ಸಿ.ಜೆ.ಎಂ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.
2012 ರ ಜುಲೈ 8 ರಂದು ಸಂಜೆ 4.45 ರ ಸುಮಾರಿಗೆ ಮಹಾದೇವಪ್ಪ ಎಂಬಾತನು ಉಡುಪಿ ತಾಲೂಕು ನಂದಿಕೂರು ಗ್ರಾಮದ ಅಡ್ವೆ ಅಣ್ಣಾಜಿಗೋಳಿ ಎಂಬಲ್ಲಿರುವ ಅಡ್ವೆಯ ವಿಜಯ ರೈ ಅವರ ಬಾಬ್ತು ಹಂಚಿನ ಕಟ್ಟಡದಲ್ಲಿರುವ ಒಂದನೇ ಅಂತಸ್ತಿನ ಕೋಣೆಗೆ ಅಕ್ರಮ ಪ್ರವೇಶ ಮಾಡಿ, ಕೋಣೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಚೆನ್ನರವರನ್ನು ಉದ್ದೇಶಿಸಿ, ಕೋಣೆಯಿಂದ ಹೊರಹೋಗುವಂತೆ ಹೇಳಿ, ಅವರ ಹೊಟ್ಟೆ ಹಾಗೂ ಬಲಕೈಬೆರಳಿಗೆ ಕತ್ತಿಯಿಂದ ಹೊಡೆದು ತೀವ್ರ ಸ್ವರೂಪದ ಗಾಯ ಉಂಟುಮಾಡಿರುವ ಹಿನ್ನೆಲೆ, ಪಡುಬಿದ್ರೆ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಯ ವಿರುದ್ಧ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆದು, ಆರೋಪ ಸಾಬೀತಾದ ಹಿನ್ನೆಲೆ, ನಗರದ ಹೆಚ್ಚುವರಿ ಸಿ.ಜೆ ಮತ್ತು ಎ.ಸಿ.ಜೆ.ಎಂ ನ್ಯಾಯಾಲಯದ ನ್ಯಾಯಾಧೀಶ ಪಿ.ಆರ್ ಯೋಗೀಶ್ ಅವರು ಆರೋಪಗೆ ಮಹಾದೇವಪ್ಪನಿಗೆ 6 ತಿಂಗಳುಗಳ ಜೈಲು ಶಿಕ್ಷೆ ಹಾಗೂ 10000 ರೂ. ದಂಡ ವಿಧಿಸಿ, ತೀರ್ಪು ನೀಡಿರುತ್ತಾರೆ.
ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಬದರೀನಾಥ್ ನಾಯರಿ ವಾದ ಮಂಡಿಸಿರುತ್ತಾರೆ.