ತಿರುವನಂತಪುರಂ : ಕೇರಳದ ಕಲಮಸ್ಸೆರಿಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಟ್ಟಗಾಯಗಳಿಂದ ಬಳಲುತ್ತಿದ್ದ ಯುವಕನೊಬ್ಬ ಗುರುವಾರ ರಾತ್ರಿ ಸಾವಿಗೀಡಾಗಿದ್ದು, ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ.
ಪ್ರವೀಣ್ ಪ್ರದೀಪನ್(24) ಮೃತ ಯುವಕ.
ಆತ ಶೇ 50 ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ. ವೆಂಟಿಲೇಟರ್ ಬೆಂಬಲದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ರಾತ್ರಿ 10.40ರ ಸುಮಾರಿಗೆ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ. ಪ್ರವೀಣ್ ಸ್ಫೋಟದಲ್ಲಿ ಮೃತಪಟ್ಟ 12 ವರ್ಷದ ಲಿಬ್ನಾ ಅವರ ಹಿರಿಯ ಸಹೋದರ. ಅವರ ತಾಯಿ ಸಾಲಿ ಪ್ರದೀಪನ್ ಕೂಡ ಶನಿವಾರ ಮೃತಪಟ್ಟಿದ್ದಾರೆ.

ಸ್ಫೋಟದಲ್ಲಿ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಅವರ ಸಹೋದರ ರಾಹುಲ್ ಅವರನ್ನು ಕೂಡ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಫೋಟದಲ್ಲಿ ಈಗಾಗಲೇ ಪೆರುಂಬವೂರ್ನ ಇರಿಂಗೋಲ್ನ ಲಿಯೋನಾ ಪೌಲೋಸ್ (55), ತೊಡುಪುಳದ ಕಲಿಯಾರ್ನ ಕುಮಾರಿ (52), ಕಲಮಸ್ಸೇರಿಯ ಮೋಲಿ ಜಾಯ್ (61) ಸಾವಿಗೀಡಾಗಿದ್ದಾರೆ. ಪ್ರಕರಣ ಸಂಬಂಧ ಒಟ್ಟು 11 ರೋಗಿಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಆರು ಮಂದಿಯನ್ನು ಐಸಿಯುಗೆ ದಾಖಲಿಸಲಾಗಿದೆ.
