ನವದೆಹಲಿ : ಅಂಡಮಾನ್ ಹಾಗೂ ನಿಕೋಬಾರ್ ದ್ವೀಪ ಸಮೂಹದ ಬಳಿ ವಾಯುಭಾರ ಕುಸಿತ ಉಂಟಾಗಿದೆ. ಪರಿಣಾಮ, ಬಂಗಾಳ ಕೊಲ್ಲಿಯಲ್ಲಿ ಚಂಡ ಮಾರುತ ಸೃಷ್ಟಿಯಾಗುವ ಸಾಧ್ಯತೆ ಇದೆ. ನವೆಂಬರ್ 29 ಬುಧವಾರ ಬಂಗಾಳ ಕೊಲ್ಲಿಯಲ್ಲಿ ಚಂಡ ಮಾರುತ ಸೃಷ್ಟಿಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಪ್ರಕಟಣೆಯ ಮೂಲಕ ತಿಳಿಸಿದೆ.
ಬಂಗಾಳ ಕೊಲ್ಲಿಯ ನೈರುತ್ಯ ಭಾಗದಲ್ಲಿ ವಾಯು ಭಾರ ಕುಸಿತ ಉಂಟಾಗಿದೆ. ಮುಂದಿನ 48 ಗಂಟೆಗಳಲ್ಲಿ ಬಂಗಾಳ ಕೊಲ್ಲಿಯ ಆಗ್ನೇಯ ಭಾಗಕ್ಕೂ ಈ ಚಂಡ ಮಾರುತ ಸಾಗಬಹುದಾಗಿದೆ. ಇನ್ನು ಭಾರತದ ಯಾವ ಭಾಗದ ಸಾಗರ ತೀರಕ್ಕೆ ಚಂಡ ಮಾರುತ ಅಪ್ಪಳಿಸಬಹುದು ಎಂದು ಇನ್ನೂ ಕೂಡಾ ನಿಖರವಾಗಿ ಅಂದಾಜು ಮಾಡಲಾಗಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅದಾಗ್ಯೂ ಭಾರತದ ಕರಾವಳಿಗೆ ನವೆಂಬರ್ 28 ಹಾಗೂ ನವೆಂಬರ್ 29 ರಂದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಭಾರೀ ಗಾಳಿ, ಮಳೆ :
ಅಂಡಮಾನ್ ಹಾಗೂ ನಿಕೋಬಾರ್ ದ್ವೀಪ ಸಮೂಹವು ನವೆಂಬರ್ 28 ಹಾಗೂ ನವೆಂಬರ್ 29 ರಂದು ಭಾರೀ ಗಾಳಿ, ಭಾರೀ ಮಳೆಗೆ ಸಾಕ್ಷಿ ಆಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಸಾಗರ ವಾತಾವರಣದಲ್ಲಿ ಆಗುತ್ತಿರುವ ವೈಪರಿತ್ಯಗಳಿಂದಾಗಿ ದಕ್ಷಿಣ ಅಂಡಮಾನ ಸಾಗರ, ಅಂಡಮಾನ್ ನಿಕೋಬಾರ್ ದ್ವೀಪ ಸಮೂಹಗಳಲ್ಲಿ ಸಾಕಷ್ಟು ಮಳೆ, ಗಾಳಿ ಉಂಟಾಗಬಹುದು ಎಂಬ ಸಾಧ್ಯತೆಗಳನ್ನು ಹವಾಮಾನ ಇಲಾಖೆ ತಿಳಿಸಿದೆ.
ಕಳೆದ ನವೆಂಬರ್ 17 ರಂದು ಬಂಗಾಳ ಕೊಲ್ಲಿಯಲ್ಲಿ ಚಂಡ ಮಾರುತ ಉಂಟಾಗಿತ್ತು. ಈ ಚಂಡಮಾರುತಕ್ಕೆ ಮಿಧಿಲಿ ಎಂದು ಹೆಸರಿಡಲಾಗಿತ್ತು. ಬಾಂಗ್ಲಾ ದೇಶದ ಕರಾವಳಿ ತಲುಪುವ ವೇಳೆಗೆ ಈ ಚಂಡ ಮಾರುತ ದುರ್ಬಲವಾಗಿತ್ತು. ಆದಾಗ್ಯೂ ಚಂಡ ಮಾರುತದ ಪರಿಣಾಮದಿಂದಾಗಿ ತ್ರಿಪುರಾ ಹಾಗೂ ಮಿಜೋರಾಂ ರಾಜ್ಯಗಳಲ್ಲಿ ಭಾರೀ ಮಳೆ ಆಗಿತ್ತು.
ಮಿಧಿಲಿ ಚಂಡ ಮಾರುತವು ಬಂಗಾಳ ಕೊಲ್ಲಿಯಲ್ಲಿ ಈ ಜಲ ವರ್ಷದಲ್ಲಿ ಸೃಷ್ಟಿಯಾದ ಎರಡನೇ ಚಂಡ ಮಾರುತವಾಗಿತ್ತು. ಇದಕ್ಕೂ ಮುನ್ನ ಹಮೂನ್ ಚಂಡ ಮಾರುತವು ಬಾಂಗ್ಲಾ ದೇಶ ಕರಾವಳಿಯಲ್ಲಿ ಆರ್ಭಟಿಸಿತ್ತು. ಇದೀಗ ಮೂರನೇ ಚಂಡ ಮಾರುತದ ಭೀತಿ ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿದೆ.