ಮಂಗಳೂರು : ಹಣ ದ್ವಿಗುಣಗೊಳಿಸುವ ಆ್ಯಪ್ಗೆ 21 ಲಕ್ಷ ರೂ. ಹಣವನ್ನು ಹೂಡಿಕೆ ಮಾಡಿ ವಂಚನೆಗೊಳಗಾದ ಹಿನ್ನೆಲೆ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಂಗಬೆಟ್ಟು ಪುಚ್ಚಮೊಗರು ಎಂಬಲ್ಲಿ ಘಟನೆ ನಡೆದಿದೆ.
ಮೃತಳನ್ನು ಬಂಟ್ವಾಳದ ಕುಕ್ಕಿಪಾಡಿ ನಿವಾಸಿ ವೀಟಾ ಮರಿನಾ ಡಿಸೋಜಾ(32) ಎಂದು ಗುರುತಿಸಲಾಗಿದೆ.
ಕಳೆದ ಕೆಲ ತಿಂಗಳ ಹಿಂದೆ ಹಣ ದ್ವಿಗಣಗೊಳಿಸುವ ಆ್ಯಪ್ ಗೆ 21 ಲಕ್ಷ ಹಣ ಹಾಕಿದ್ದರು. ಆದ್ರೆ ಹಣ ದ್ವಿಗುಣಗೊಳ್ಳದೇ ಮೋಸ ಹೋಗಿರುವ ಬಗ್ಗೆ ಬಂಟ್ವಾಳ ಠಾಣೆಗೆ ದೂರು ನೀಡಿದ್ದರು.
ಈಗಾಗಲೇ ಮದುವೆಯಾಗಿ ಹಲವು ವರ್ಷಗಳಿಂದ ಮಕ್ಕಳಾಗದ ಕಾರಣ ಅವರು ಮನ ನೊಂದಿದ್ದರು ಎನ್ನಲಾಗಿದೆ. ಈಗ ತಾನು ಹೂಡಿಕೆ ಮಾಡಿದ ಲಕ್ಷಾಂತರ ರೂಪಾಯಿ ಕೂಡ ಹೋಗಿದೆ.
ಇದರಿಂದ ನೊಂದ ಅವರು ಪುಚ್ಚಮೊಗರು ಫಲ್ಗುಣಿ ನದಿಯ ಸೇತುವೆ ಮೇಲೆ ಸ್ಕೂಟರ್ ನಿಲ್ಲಿಸಿ ನದಿಗೆ ಹಾರಿದ್ದಾರೆ. ಇನ್ನು ಸ್ಕೂಟರ್ ಪತ್ತೆಯಾದ ಬಳಿಕ ಅಗ್ನಿಶಾಮಕದಳದ ಸಿಬ್ಬಂದಿ ನದಿಯಲ್ಲಿ ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ.
ಈ ಘಟನೆ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.