ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಕೇಸ್ಗೆ ಸಂಬಂಧಿಸಿದಂತೆ ಶಾಸಕ ಯತ್ನಾಳ್ ಹಾಗೂ ಸಿಬಿಐ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಿ ನ್ಯಾ.ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠದಿಂದ ಶುಕ್ರವಾರ ಆದೇಶ ಹೊರಡಿಸಲಾಗಿದೆ.
ಅಲ್ಲದೇ, ಸಿಬಿಐ ಅರ್ಜಿ ಸಂಬಂಧ ಡಿಕೆ ಶಿವಕುಮಾರ್ಗೆ ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಇಂದು ಹೈಕೋರ್ಟ್ ನ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರನ್ನೊಳಗೊಂಡ ಏಕ ಪೀಠದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣವನ್ನು ಸಿಬಿಐಗೆ ವಹಿಸಿದ್ದನ್ನು ಹಿಂಪಡೆದ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಯಿತು.
ಈ ವೇಳೆ ಹೈಕೋರ್ಟ್ ನ್ಯಾಯಪೀಠದ ಮುಂದೆ ಕಾನೂನು ದುರುಪಯೋಗವನ್ನು ರಾಜ್ಯ ಸರ್ಕಾರ ಮಾಡಿಕೊಂಡಿದೆ ಎಂಬುದಾಗಿ ವಾದವನ್ನು ಮಂಡಿಸಲಾಯಿತು.
ಕ್ರಮ ಪ್ರಶ್ನಿಸಿ ಸಿಬಿಐ ಕೂಡ ಅರ್ಜಿ ಸಲ್ಲಿಸಿದೆ. ಸಿಬಿಐಗೆ ನೀಡಿದ ಸಮ್ಮತಿ ಹಿಂಪಡೆಯಲು ಸರ್ಕಾರಕ್ಕೆ ಅಧಿಕಾರವಿದೆಯೇ? ಪೂರ್ವಾನ್ವಯವಾಗಿ ತನಿಖೆಗೆ ನೀಡಿದ ಸಮ್ಮತಿ ಹಿಂಪಡೆಯಬಹುದೇ ಎಂದು ಸರ್ಕಾರಕ್ಕೆ ನ್ಯಾ.ಕೃಷ್ಣ ದೀಕ್ಷಿತ್ರಿದ್ದ ಪೀಠ ಪ್ರಶ್ನೆ ಮಾಡಿತ್ತು.
ರಾಜ್ಯದಲ್ಲಿ ಈ ರೀತಿಯ ಮೊದಲ ಪ್ರಕರಣವಿದು. ಹಿಂದಿನ ಸರ್ಕಾರ ನೀಡಿದ ಸಮ್ಮತಿಯನ್ನು ಹೊಸ ಸರ್ಕಾರ ಹಿಂಪಡೆಯಬಹುದೇ? ಸರ್ಕಾರದ ನಿರಂತರತೆಯ ಬಗ್ಗೆಯೂ ಉತ್ತರಿಸಬೇಕಿದೆ. ಗಂಭೀರ ವಿಚಾರವಾಗಿರುವುದರಿಂದ ವಿಸ್ತೃತ ಪೀಠಕ್ಕೆ ಕೇಸ್ ವರ್ಗಾಯಿಸುವ ಇಂಗಿತವನ್ನು ಹೈಕೋರ್ಟ್ ವ್ಯಕ್ತಪಡಿಸಿತ್ತು
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಸೂಕ್ತವೆನಿಸಿದ ವಿಸ್ತೃತ ಪೀಠ ರಚಿಸಬಹುದು ಎಂದು ಏಕ ಸದಸ್ಯ ಪೀಠ ಹೇಳಿದೆ.