ಕಾಸರಗೋಡು : ಅತ್ತ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾ ಕಾರ್ಯ ನಡೆಯುತ್ತಿದ್ದರೆ, ಇತ್ತ ದೇಶವೆಲ್ಲ ಸಂಭ್ರಮದಲೆಯ ಅಪ್ಪಿಕೊಂಡಿದೆ. ಅಯೋಧ್ಯೆಯಲ್ಲಿ ಶ್ರೀರಾಮ ನೆಲೆಯಾಗಬೇಕೆಂಬ ಅದೆಷ್ಟೋ ವರ್ಷಗಳ ಹಂಬಲ, ಆಸೆ ಬೇರೂರಿ ಹೆಮ್ಮರವಾಗಿ ನಿಂತಿದೆ. ಹರಜೆ ಹೊತ್ತವರೂ ಇದ್ದಾರೆ.
ಅಂತಹುದೇ ಹರಕೆ ಹೊತ್ತವರು ಬಹುಭಾಷಾ ವಿದ್ವಾಂಸ, ಲೇಖಕ ಕಾಸರಗೋಡಿನ ಕಮಲಾಕ್ಷ. ಮಂದಿರ ನಿರ್ಮಾಣದವರೆಗೆ ಗಡ್ಡ ತೆಗೆಯುವುದಿಲ್ಲವೆಂದು ಕೆಲ ವರ್ಷಗಳ ಹಿಂದೆ ಅವರು ಹರಕೆ ಹೊತ್ತಿದ್ದಾರೆ.
ಆದರೆ ರಾಮಮಂದಿರ ನಿರ್ಮಾಣವಾಗದೇ ಗಡ್ಡ ತೆಗೆಯುವುದಿಲ್ಲವೆಂಬ ಸಂಕಲ್ಪಕ್ಕೆ ಈಗ 8 ವರ್ಷ. ಇದೀಗ ಈ ಹರಕೆ ತೀರಿಸುವ ಸಕಾಲ ಬಂದಿದೆ.
ಪ್ರಾಧ್ಯಾಪಕ – ಸಾಹಿತಿ :
ಕಾಸರಗೋಡು ಉಳಿಯತ್ತಡ್ಕದ ಕಮಲಾಕ್ಷ ಅವರು ಪ್ರೊಫೆಸರ್ ಆಗಿದ್ದವರು. ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ನಂತರ ಕಾಸರಗೋಡಿನ ನಲಂದ ವಿವಿಯಲ್ಲಿ ಪ್ರಾಂಶುಪಾಲರಾಗಿದ್ದರು. ಅಲ್ಲದೆ ಮಂಜೇಶ್ವರ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿಯಾಗಿದ್ದರು. ತುಳು ಸೇರಿದಂತೆ ಹಲವು ಭಾಷೆಯಲ್ಲಿ ಹಲವು ಪುಸ್ತಕ ಸಾಹಿತ್ಯ ರಚಿಸಿ ಸಾರಸ್ವತ ಲೋಕಕ್ಕೆ ಕೊಡುಗೆ ನೀಡಿದ್ದಾರೆ. ಮಲಯಾಳದಿಂದ ಕನ್ನಡಕ್ಕೆ ಹಲವು ಭಾಷಾಂತರ ಕೃತಿ ರಚಿಸಿದ್ದಾರೆ. ಹಲವು ಕಾದಂಬರಿ, ವಿಮರ್ಷಾತ್ಮಕ ಲೇಖನ ಬರೆದಿದ್ದಾರೆ.