ಹೊಸದಿಲ್ಲಿ: ಕ್ರಿಕೆಟ್ನಲ್ಲಿ ರಾಜಕೀಯ ಮಾಡಿದ್ದ ಆಂಧ್ರ ಕ್ರಿಕೆಟ್ ಅಸೋಸಿಯೇಷನ್ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಹನುಮ ವಿಹಾರಿ, ಭವಿಷ್ಯದಲ್ಲಿ ಎಂದಿಗೂ ಆಂಧ್ರ ತಂಡದ ಪರವಾಗಿ ಆಡುವುದೇ ಇಲ್ಲ ಎಂದು ಶಪಥ ಮಾಡಿದ್ದಾರೆ
ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಹಲವು ಸಂಗತಿಗಳನ್ನು ಹನುಮ ವಿಹಾರಿ ಬಹಿರಂಗಪಡಿಸಿದ್ದಾರೆ. ರಾಜಕೀಯ ವ್ಯಕ್ತಿಯ ಮಗನೊಬ್ಬನ ವಿಚಾರಕ್ಕೆ ಆಂಧ್ರ ಕ್ರಿಕೆಟ್ ಅಸೋಸಿಯೇಷನ್ ನನ್ನನ್ನು ವಿದಾಯ ಹೇಳುವಂತೆ ಒತ್ತಡ ಹೇರಿತ್ತು. ತಮ್ಮ ತಂಡದ ಆಟಗಾರರು ತನ್ನನ್ನು ಬೆಂಬಲಿಸಿದ ಪತ್ರವನ್ನೂ ಕೂಡ ವಿಹಾರಿ ಹಂಚಿಕೊಂಡಿದ್ದಾರೆ.
![](http://diksoochinews.com/wp-content/uploads/2023/10/diksoochi_inline.jpeg)
ಬಂಗಾಳ ವಿರುದ್ಧದ ಮೊದಲ ಪಂದ್ಯಕ್ಕೆ ನಾನು ಆಂಧ್ರ ತಂಡಕ್ಕೆ ನಾಯಕನಾಗಿದ್ದೆ. ಈ ಪಂದ್ಯದಲ್ಲಿ ನಾನು 17ನೇ ಆಟಗಾರನ ವಿರುದ್ಧ ಜೋರಾಗಿ ಕೂಗಿದ್ದೆ. ಆದರೆ, ಆ ಆಟಗಾರ ನನ್ನ ವಿರುದ್ಧ ಅವರ ಅಪ್ಪನಿಗೆ (ರಾಜಕೀಯ ವ್ಯಕ್ತಿ) ದೂರು ನೀಡಿದ್ದ. ನನ್ನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಅವರ ತಂದೆ ಅಸೋಸಿಯೇಷನ್ಗೆ ಹೇಳಿದ್ದರು.
ಕಳೆದ ವರ್ಷ ರನ್ನರ್ ಅಪ್ ಆಗಿದ್ದ ಬಂಗಾಳ ತಂಡ ನೀಡಿದ್ದ 410 ರನ್ಗಳನ್ನು ನಾವು ಚೇಸ್ ಮಾಡಿದ್ದೆವು. ಆದರೆ, ನನ್ನದು ಯಾವುದೇ ತಪ್ಪಿಲ್ಲದಿದ್ರೂ ನನ್ನನ್ನು ನಾಯಕತ್ವದಿಂದ ಕೆಳಗೆ ಇಳಿಯುವಂತೆ ಕೇಳಲಾಗಿತ್ತು. ನಾನು ಆ ಆಟಗಾರನನ್ನು ವೈಯಕ್ತಿಕವಾಗಿ ತೆಗೆದುಕೊಂಡಿರಲಿಲ್ಲ. ಆದರೆ, ಆಂಧ್ರ ಪರ 7 ವರ್ಷಗಳು ಹಾಗೂ ಭಾರತ ತಂಡದ 16 ಟೆಸ್ಟ್ ಪಂದ್ಯಗಳನ್ನು ಆಡಿರುವ ಆಟಗಾರನಿಗಿಂತ ಆ ಆಟಗಾರನೇ ಆಂಧ್ರ ಕ್ರಿಕೆಟ್ ಮಂಡಳಿಗೆ ಮುಖ್ಯವಾಯಿತು ಎಂದು ಹನುಮ ವಿಹಾರಿ ಅಳಲು ತೋಡಿಕೊಂಡಿದ್ದಾರೆ.
ನನಗೆ ತುಂಬಾ ಮುಜುಗರವಾಗಿತ್ತು ಆದರೆ, ತಂಡಕ್ಕೆ ಮತ್ತು ಕ್ರಿಕೆಟ್ ಮೇಲೆ ನಾನಿಟ್ಟಿರುವ ಗೌರವದಿಂದಾಗಿ ಈ ಆವೃತ್ತಿಯಲ್ಲಿ ಆಡುವುದನ್ನು ಮುಂದುವರಿಸಿದ್ದೆ. ಆಟಗಾರರು ಹೇಳುವುದನ್ನು ಮಾತ್ರ ಅಸೋಸಿಯೇಷನ್ ಕೇಳಬೇಕು. ಏಕೆಂದರೆ ಆಟಗಾರರಿಂದಲೇ ಅಸೋಸಿಯೇಷನ್ ಇದೆ. ಇದನ್ನು ಅವರು ಪರಿಗಣಿಸದೆ ಇರುವುದು ದುಖಃದ ವಿಷಯ ಎಂದು ಹನುಮ ವಿಹಾರಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನಾನು ಅವಮಾನ ಮತ್ತು ಮುಜುಗರಕ್ಕೊಳಗಾಗಿದ್ದೇನೆ ಆದರೆ ನಾನು ಅದನ್ನು ಇಂದಿನವರೆಗೂ ವ್ಯಕ್ತಪಡಿಸಿಲ್ಲ. ನನ್ನ ಆತ್ಮಗೌರವವನ್ನು ಕಳೆದುಕೊಂಡಿರುವ ಆಂಧ್ರದ ಪರವಾಗಿ ನಾನು ಎಂದಿಗೂ ಆಡುವುದಿಲ್ಲ ಎಂದು ನಿರ್ಧರಿಸಿದ್ದೇನೆ. ನಾನು ತಂಡವನ್ನು ಪ್ರೀತಿಸುತ್ತೇನೆ. ನಾವು ಪ್ರತಿ ಋತುವಿನಲ್ಲಿ ಬೆಳೆಯುತ್ತಿರುವ ರೀತಿಯನ್ನು ನಾನು ಪ್ರೀತಿಸುತ್ತೇನೆ ಆದರೆ ಮಂಡಳಿಯು ನಾವು ಬೆಳೆಯುವುದನ್ನು ಬಯಸುವುದಿಲ್ಲ ಎಂದು ವಿಹಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
![](http://diksoochinews.com/wp-content/uploads/2023/10/diksoochi_inline.jpeg)
![](http://diksoochinews.com/wp-content/uploads/2023/11/Untitled-1.png)