ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸ್ನೇಹಿತರ ಜೊತೆ ಅಯೋಧ್ಯೆಗೆ ತೆರಳಿ ರಾಮನ ದರ್ಶನ ಪಡೆದಿದ್ದಾರೆ. ರಾಮನ ಕಣ್ಣುಗಳಲ್ಲಿನ ತೇಜಸ್ಸು ಕಂಡು ಹಿರಿಹಿರಿ ಹಿಗ್ಗಿದ್ದಾರೆ. ಅದೊಂದು ಅವರ್ಣನೀಯ ಅನುಭೂತಿ ಎಂದು ರಕ್ಷಿತ್ ಬರೆದುಕೊಂಡಿದ್ದಾರೆ.
ಅಯೋಧ್ಯೆಗೆ ತೆರಳುವುದು ಸಂಕಲ್ಪವಾಗಿತ್ತು. ಕನ್ನಡದ ಶಿಲ್ಪಿ ಕೆತ್ತಿರುವ ಬಾಲರಾಮನ ವಿಗ್ರಹವನ್ನು ತದೇಕ ಚಿತ್ತದಿಂದ ನೋಡುತ್ತಾ ನಿಂತುಬಿಟ್ಟೆ. ಅವು ನಿಜವಾದ ಕಣ್ಣುಗಳು ಅನಿಸಿತು. ಜೂಮ್ ಮಾಡಿಕೊಂಡು ಹಲವಾರು ಬಾರಿ ನೋಡಿದ್ದೇನೆ. ಈ ಕಣ್ಣುಗಳನ್ನು ಹೇಗೆ ಕೆತ್ತಿದ್ದೀರಿ ಎಂದು ಶಿಲ್ಪಿಯ ಜೊತೆ ನಾನು ಮಾತನಾಡಬೇಕಿದೆ ಎಂದಿದ್ದಾರೆ ರಕ್ಷಿತ್ ಶೆಟ್ಟಿ.
ಹೊಸ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದರೂ ಈ ನಡುವೆ ಅವರು ಟೆಂಪಲ್ ರನ್ ಕೂಡ ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ಅಲೆವೂರು ಜೋಡು ರಸ್ತೆಯಲ್ಲಿ ನಡೆದ 118ನೇ ನೇಮೋತ್ಸವದಲ್ಲಿ ಪಾಲ್ಗೊಂಡಿದ್ದರು. ಜೊತೆಗೆ ಅವರು ತಮ್ಮ ಮನೆಯಲ್ಲಿ ನಡೆದ ಕೋಲದಲ್ಲೂ ಭಾಗಿಯಾಗಿದ್ದರು. ಇದೀಗ ಅಯೋಧ್ಯೆಯಲ್ಲಿ ಕಾಣಿಸಿಕೊಂಡಿದ್ದಾರೆ ರಕ್ಷಿತ್.
ಸ್ನೇಹಿತರ ಜೊತೆಗೆ ಅಯೋಧ್ಯೆಗೆ ತೆರಳಿರುವ ರಕ್ಷಿತ್, ಅಲ್ಲಿನ ರಾಮನ ದರ್ಶನ ಪಡೆದಿದ್ದಾರೆ. ಜೊತೆಗೆ ರಾಮಲಲ್ಲಾ ಮತ್ತು ಅಯೋಧ್ಯೆಯ ಕುರಿತಂತೆ ಮೆಚ್ಚುಗೆಯನ್ನೂ ವ್ಯಕ್ತ ಪಡಿಸಿದ್ದಾರೆ. ಅವರು ಅಯೋಧ್ಯೆಯಲ್ಲಿ ಇರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.