ಬಾಲಿವುಡ್ ನಿರ್ದೇಶಕ ನಿತೇಶ್ ತಿವಾರಿ ಅವರು ಮೂರು ಪಾರ್ಟ್ಗಳಲ್ಲಿ ‘ರಾಮಾಯಣ’ ಸಿನಿಮಾ ಮಾಡುವುದಕ್ಕೆ ಮುಂದಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಅವರು ಪ್ರಭು ಶ್ರೀರಾಮನ ಪಾತ್ರ ಮಾಡುತ್ತಿದ್ದರೆ, ನಟಿ ಸಾಯಿ ಪಲ್ಲವಿ ಅವರು ಸೀತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ರಾವಣನಾಗಿ ನಟ ಯಶ್ ನಟಿಸುವುದು ಖಚಿತ. ಈ ಸಿನಿಮಾ ತಂಡದ ಎದುರು ಯಶ್ ಅವರು ಹೊಸದೊಂದು ಬೇಡಿಕೆಯನ್ನು ಇಟ್ಟಿದ್ದಾರೆ ಎನ್ನಲಾಗಿದೆ.
ರಾಮಾಯಣ’ ಸಿನಿಮಾಗೆ ‘ರಾಕಿಂಗ್ ಸ್ಟಾರ್’ ಯಶ್ ಸಹ ನಿರ್ಮಾಪಕರಾಗಲಿದ್ದಾರೆ. ಹೌದು, ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ರಾವಣನ ಪಾತ್ರದಲ್ಲಿಯೂ ಕಾಣಿಸಿಕೊಳ್ಳಲಿರುವ ಅವರು, ಅದಕ್ಕಾಗಿ 80 ಕೋಟಿ ರೂ.ಗಳಿಗೂ ಅಧಿಕ ಸಂಭಾವನೆಯನ್ನು ಪಡೆಯಲಿದ್ದಾರೆ. ಆದರೆ ಆ ಸಂಭಾವನೆ ಬದಲು ಈ ಚಿತ್ರಕ್ಕೆ ಸಹ ನಿರ್ಮಾಪಕರಾಗಲು ಅವರು ಮುಂದಾಗಿದ್ದಾರೆ ಎನ್ನಲಾಗಿದೆ.
ನಟ ಯಶ್ ಅವರು ತಮ್ಮದೇ ಆದ ‘ಮಾನ್ಸ್ಟರ್ ಮೈಂಡ್’ ಕ್ರಿಯೇಷನ್ಸ್ ಎಂಬ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದಾರೆ. ಮುಂಬರುವ ‘ಟಾಕ್ಸಿಕ್’ ಸಿನಿಮಾಗೆ ಇದೇ ಬ್ಯಾನರ್ ಮೂಲಕ ಯಶ್ ಹಣವನ್ನು ಹಾಕುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆಗೆ ‘ಮಾನ್ಸ್ಟರ್ ಮೈಂಡ್’ ಕ್ರಿಯೇಷನ್ಸ್ ಕೂಡ ‘ಟಾಕ್ಸಿಕ್’ ಸಿನಿಮಾದ ನಿರ್ಮಾಣದಲ್ಲಿ ಪಾಲುದಾರಿಕೆಯನ್ನು ಹೊಂದಿದೆ. ಹಾಗಾಗಿ, ಈಗ ‘ರಾಮಾಯಣ’ ಸಿನಿಮಾಗೂ ಇದೇ ತಂತ್ರವನ್ನು ಯಶ್ ಉಪಯೋಗಿಸುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಇನ್ನೊಂದೆಡೆ, ಈ ಸಿನಿಮಾದ ಶೂಟಿಂಗ್ ಆರಂಭವಾಗಿದ್ದು, ಇದರ ದೃಶ್ಯಗಳು ಆನ್ಲೈನ್ನಲ್ಲಿ ಸೋರಿಕೆಯಾಗುವುದನ್ನು ತಡೆಯಲು ನಿರ್ದೇಶಕರು ಶೂಟಿಂಗ್ ಸ್ಥಳದಲ್ಲಿ ನೋ ಫೋನ್ ಪಾಲಿಸಿಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ, ರಾಮನ ಪಾತ್ರ ಮಾಡಲಿರುವ ರಣಬೀರ್ ಕಪೂರ್, ಇದಕ್ಕಾಗಿ ಕಠಿಣ ವ್ಯಾಯಾಮಗಳನ್ನು ಮಾಡುತ್ತಿದ್ದಾರೆ.
ನಟ ರಣಬೀರ್ ಕಪೂರ್ ಅವರು ಈ ಸಿನಿಮಾದಲ್ಲಿ ಶ್ರೀರಾಮನ ಪಾತ್ರ ಮಾಡುತ್ತಿದ್ದು, ಅದಕ್ಕಾಗಿ ಅವರು ಭರ್ತಿ 75 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ. ಮೂರು ಪಾರ್ಟ್ಗಳಿಗೆ ಒಟ್ಟು 225 ಕೋಟಿ ರೂ. ಹಣ ಅವರಿಗೆ ಸಂಭಾವನೆ ರೂಪದಲ್ಲೇ ಸಿಗಲಿದೆ. ಇನ್ನು, ಸೀತೆ ಪಾತ್ರ ಮಾಡಲಿರುವ ನಟಿ ಸಾಯಿ ಪಲ್ಲವಿಗೆ 6 ಕೋಟಿ ರೂ. ಸಂಭಾವನೆ ನಿಗದಿಯಾಗಿದ್ದು, ಮೂರು ಪಾರ್ಟ್ಗಳಿಗೆ ಒಟ್ಟು 18 ಕೋಟಿ ರೂ. ಹಣ ಅವರಿಗೆ ಸಿಗಲಿದೆ. ಯಶ್ಗೂ ದೊಡ್ಡಮೊತ್ತದ ಸಂಭಾವನೆ ಫಿಕ್ಸ್ ಆಗಿತ್ತು. ಆದರೆ ಅವರು ಸಂಭಾವನೆ ಬದಲು ನಿರ್ಮಾಣದಲ್ಲಿ ಪಾಲುದಾರಿಕೆ ಹೊಂದುವ ಪ್ಲ್ಯಾನ್ ಮಾಡಿದ್ದಾರೆ.