ಹೊಸದಿಲ್ಲಿ: ಮಳೆ ಬಂದು ಹೋದ ಬಳಿಕವೂ ಬಿಸಿಲಿನ ಝಳದಿಂದ ತತ್ತರಿಸಿರುವ ಜನತೆಗೆ ನೆಮ್ಮದಿಯ ಸುದ್ದಿ ದೊರಕಿದೆ. ಭಾರತೀಯ ಹವಾಮಾನ ಇಲಾಖೆಯು ಮೇ 10 ರವರೆಗೆ ಪೂರ್ವ ಮತ್ತು ದಕ್ಷಿಣ ಭಾರತದಲ್ಲಿ ಗುಡುಗು, ರಭಸದಿಂದ ಕೂಡಿದ ಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೋಮವಾರ ಹೇಳಿದೆ. ಈ ವೇಳೆ ತಂಪಾದ ವಾತಾವರಣ ಇರುವ ನಿರೀಕ್ಷೆ ಇದೆ.
ಭಾರತದ ಪೂರ್ವ ಭಾಗದಲ್ಲಿ ಸೋಮವಾರದಿಂದಲೇ ಬಿಸಿ ಮಾರುತಗಳ ಪ್ರಭಾವ ಕಡಿಮೆಯಾಗಲಿದೆ. ಹಾಗೆಯೇ ದಕ್ಷಿಣ ಭಾಗದಲ್ಲಿ ಮಂಗಳವಾರದಿಂದ ಬಿಸಿ ಧಗೆ ತಗ್ಗಲಿದೆ ಎಂದು ಐಎಂಡಿ ಅಂದಾಜಿಸಿದೆ. ದೇಶದ ಪೂರ್ವ ಭಾಗ ಮತ್ತು ದಕ್ಷಿಣ ಭಾಗಗಳಲ್ಲಿನ ಅನೇಕ ಪ್ರದೇಶಗಳಲ್ಲಿ ಕಳೆದ ತಿಂಗಳಿನಿಂದ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದೆ.
ಗುಜರಾತ್, ರಾಜಸ್ಥಾನ ಮತ್ತು ಪಶ್ಚಿಮ ಮಧ್ಯ ಪ್ರದೇಶ ಭಾಗಗಳನ್ನು ಒಳಗೊಂಡ ಪಶ್ಚಿಮ ಭಾರತದಲ್ಲಿ ಮುಂದಿನ ಐದು ದಿನಗಳವರೆಗೆ ಬಿಸಿ ಗಾಳಿ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ದೇಶದ ಈಶಾನ್ಯ ಭಾಗದಲ್ಲಿ ಮೇ 7ರವರೆಗೂ ಗುಡುಗು ಹಾಗೂ ವೇಗದ ಗಾಳಿ ಸಹಿತ ಭಾರಿ ಮಳೆ ಮುಂದುವರಿಯಲಿದೆ ಎಂದು ತಿಳಿಸಿದೆ.
ಭಾರತದ ದಕ್ಷಿಣ ಭಾಗದಲ್ಲಿ ಮುಂದಿನ 5 ದಿನಗಳಲ್ಲಿ ಚಂಡಮಾರುತದ ಮುನ್ಸೂಚನೆ ಇದೆ ಎಂದು ಐಎಂಡಿ ತಿಳಿಸಿದೆ. ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್, ಕೇರಳ ಮತ್ತು ಮಾಹೆ, ಕರಾವಳಿ ಆಂಧ್ರಪ್ರದೇಶ ಮತ್ತು ಯಾನಂ, ರಾಯಲಸೀಮಾ ಮತ್ತು ತೆಲಂಗಾಣದಲ್ಲಿ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ; ಮೇ 7 ಮತ್ತು 8 ರಂದು ಕರ್ನಾಟಕದ ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ; ಮತ್ತು ಮೇ 9 ರಂದು ಲಕ್ಷದ್ವೀಪದಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ.
ಎರಡು ವಾರಗಳಿಗೂ ಹೆಚ್ಚು ಸಮಯದಿಂದ ಭಾರತದ ಪೂರ್ವ ಮತ್ತು ಇತರೆ ಭಾಗಗಳ ಮೇಲೆ ಪರಿಣಾಮ ಬೀರಿರುವ ಅತಿಯಾದ ಬಿಸಿಲಿನ ಶಾಖವು ನಿಧಾನವಾಗಿ ಕಡಿಮೆಯಾಗುತ್ತದೆ. ಮುಂಬರುವ ವಾರದಲ್ಲಿ ಗುಡುಗು ಸಹಿತ ಲಘು ಮಳೆಯು ವಾತಾವರಣದ ತಾಪಮಾನವನ್ನು ಕಡಿಮೆ ಮಾಡಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.