ಮಂಗಳೂರು : ಖಾಸಗಿ ಕಾರಿನ ಚಾಲಕ ಸಮವಸ್ತ್ರ ಧರಿಸಿಲ್ಲ ಎಂಬ ನೆಪದಲ್ಲಿ ದಂಡ ವಿಧಿಸಿದ್ದು, ಇದೀಗ ದಂಡದ ಮೊತ್ತವನ್ನು ವಾಪಾಸು ನೀಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ರಾಮಲ್ ಕಟ್ಟೆಯಲ್ಲಿ ನಡೆದಿದೆ. ಮಾ.23 ರಂದು ರಾಮಲ್ ಕಟ್ಟೆ ಯಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು, ಸಮವಸ್ತ್ರ ಧರಿಸದ ಕಾರಣಕ್ಕೆ ಪಾಣೆ ಮಂಗಳೂರು ಮೂಲದ ಕಾರು ಚಾಲಕರೊಬ್ಬರಿಗೆ 500 ರೂಪೈ ದಂಡವನ್ನು ವಿಧಿಸಿದ್ದರು. ಖಾಸಗಿ ವಾಹನಗಳಿಗೆ ಸಮವಸ್ತ್ರ ಹಾಕುವ ನಿಯಮವಿಲ್ಲ, ಎಲ್ಲೋ ಬೋರ್ಡ್ ನಂಬರ್ ಪ್ಲೇಟ್ ನ ಕಾರಿನ ಚಾಲಕರಿಗೆ ಮಾತ್ರ ಸಮವಸ್ತ್ರ ಕಡ್ಡಾಯ. ಆದರೆ, ಇಲ್ಲಿ ಖಾಸಗಿ ಕಾರಿನ ಚಾಲಕರೊಬ್ಬರಿಗೆ ದಂಡ ವಿಧಿಸಲಾಗಿತ್ತು ಎನ್ನಲಾಗಿದೆ. ದಂಡದ ರಶೀದಿ ನೋಡಿದ ಕಾರು ಚಾಲಕರ ಪುತ್ರ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ.ಎಂ.ಲಕ್ಷ್ಮೀಪ್ರಸಾದ್ ಗಮನಕ್ಕೆ ತಂದಿದ್ದು, ಸಮಸ್ಯೆ ಸರಿ ಪಡಿಸುವ ಭರವಸೆ ನೀಡಿದ್ದ ಅವರು ದಂಡ ಹಾಕಿದ ಪೊಲೀಸರ ಮೂಲಕ ಚಾಲಕನಿಗೆ 500 ರೂ. ಹಿಂತಿರುಗುವಂತೆ ಮಾಡಿದ್ದಾರೆ.