ನವದೆಹಲಿ : ನ್ಯಾಯಮೂರ್ತಿ ಎನ್.ವಿ.ರಮಣರವರು ಭಾರತದ 48ನೇ ಮುಖ್ಯ ನ್ಯಾಯಮೂರ್ತಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಬೋಧಿಸಿದರು.
ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ಅವರು ಅಧಿಕಾರವಾಧಿ ಏಪ್ರಿಲ್ 23ಕ್ಕೆ ಮುಕ್ತಾಯವಾಗಿದ್ದು, ಸಂಪ್ರದಾಯದಂತೆ ಬೋಬ್ಡೆಯವರು ಹಿರಿಯ ನ್ಯಾಯಮೂರ್ತಿ ಎನ್.ವಿ.ರಮಣ ಅವರ ಹೆಸರನ್ನು ಮುಂದನ ಸಿಜೆಐ ಹುದ್ದೆಗೆ ಕಳೆದ ತಿಂಗಳು ಶೀಫಾರಸು ಮಾಡಿದ್ದರು.
ಆಂಧ್ರ ಮೂಲದ ಸಿಜೆಐ
ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪೊನ್ನಾವರಂ ಗ್ರಾಮದಲ್ಲಿ ರಮಣರವರು 1957 ಆಗಸ್ಟ್ 27 ರಂದು ಜನಿಸಿದರು. |ಈ ನಾಡು ದಿನ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದ ಅವರು, 1983ರಲ್ಲಿ ವಕೀಲ ವೃತ್ತಿ ಕೈಗೊಂಡರು. ಆಂಧ್ರ ಪ್ರದೇಶ ಹೈಕೋರ್ಟ್, ಕೇಂದ್ರೀಯ ಹಾಗೂ ಆಂಧ್ರ ಪ್ರದೇಶ ಆಡಳಿತ ನ್ಯಾಯ ಮಂಡಳಿಗಳು ಹಾಗೂ ಸುಪ್ರೀಂಕೋರ್ಟ್ ನಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ.
2000ರಲ್ಲಿ ಆಂಧ್ರಪ್ರದೇಶ ಹೈಕೋರ್ಟ್ನ ಖಾಯಂ ನ್ಯಾಯಮೂರ್ತಿಯಾಗಿ ನೇಮಕಗೊಂಡು, 2013ರಲ್ಲಿ ದೆಹಲಿ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದರು. ದೆಹಲಿ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎನ್ ವಿ ರಮಣ ಅವರನ್ನು 2014 ರ ಫೆಬ್ರವರಿ 17 ರಂದು ಸುಪ್ರೀಂಕೋರ್ಟ್ನ ಮೇಲ್ದರ್ಜೆಗೇರಿದ್ದರು.
ಆಂಧ್ರಪ್ರದೇಶ ಹೈಕೋರ್ಟಿನಿಂದ ಸುಪ್ರೀಂಕೋರ್ಟ್ ಗೆ ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆಯಾದ ಮೊದಲ ನ್ಯಾಯಮೂರ್ತಿ ಎಂಬ ಹೆಗ್ಗಳಿಕೆ ಪಡೆದಿದ್ದಾರೆ ರಮಣರವರು.