ಬ್ರಹ್ಮಾವರ : ಕಳೆದ 15 ವರ್ಷದಿಂದ ಕುಂಜಾಲು ರಸ್ತೆಯಲ್ಲಿ ಶುಚಿರುಚಿ ಎಂಬ ಹೋಟೇಲ್ ಮಾಡಿಕೊಂಡು ಬದುಕು ಕಟ್ಟಿಕೊಂಡ ಹರೀಶ್ ಪೂಜಾರಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಇದೀಗ ಅವರದೆ ಹೋಟೆಲ್ ಎದುರು ಬೀದಿ ಬದಿಯಲ್ಲಿ ಮೀನು ಮಾರಾಟ ಮಾಡಿಕೊಂಡು ಸ್ವಾಭಿಮಾನಿ ಬದುಕನ್ನು ಕಟ್ಟಿಕೊಂಡಿದ್ದಾರೆ. ಉಡುಪಿಯ ನಾನಾ ಭಾಗದಲ್ಲಿ ಕೆಲಸ ಮಾಡಿಕೊಂಡಿದ್ದ್ದ ಹರೀಶ್ ಪೂಜಾರಿ ಆರಂಭದಲ್ಲಿ ಪತ್ನಿಯೊಂದಿಗೆ ಬ್ರಹ್ಮಾವರದಲ್ಲಿ ಚಿಕ್ಕ ಹೋಟೆಲ್ ಮಾಡಿಕೊಂಡು ಸ್ವತಂತ್ರ ಬದುಕನ್ನು ಕಂಡುಕೊಂಡವರು.
ಬಾಡಿಗೆ ಮನೆಯಲ್ಲಿ ವಾಸಮಾಡಿಕೊಂಡು ಬಾಡಿಗೆಯ ಹೋಟೇಲ್ ನಲ್ಲಿ ದುಡಿದು ಕ್ರಮೇಣ ಹತ್ತಾರು ಮಂದಿಗೆ ಕೆಲಸ ನೀಡುವ ಮಟ್ಟಕ್ಕೆ ಇವರ ಶುಚಿರುಚಿ ಹೋಟೇಲ್ ಬೆಳೆದು ನಿಂತು ಬ್ರಹ್ಮಾವರದಲ್ಲೆ ಒಂದು ಸ್ವಂತ ಮನೆಯನ್ನು ಮಾಡಿಕೊಂಡವರು. ಕಳೆದ ವರ್ಷವೇ ಆದ ಲಾಕ್ ಡೌನ್ ನಿಂದ ಅನೇಕ ವ್ಯವಹಾರಸ್ಥರು, ಸಣ್ಣ ವ್ಯಾಪಾರಿಗಳು ಕುಟುಂಬ ನಿರ್ವಹಣೆ ಮತ್ತು ಜೀವನಕ್ಕೆ ತತ್ತರಿಸಿದಂತೆ ಇವರ ಬದುಕು ಕೂಡಾ ಅದೇ ರೀತಿಯಾಗಿತ್ತು.
ಬೆಳಿಗ್ಗೆ ಮೀನು ವ್ಯಾಪಾರ; ನಂತರ ಹೊಟೇಲ್ ಕೆಲಸ
ಇಂದಿನಿಂದ ಬೆಳಿಗ್ಗೆ ಬೇಗನೆ ಮಲ್ಪೆಯಿಂದ ಇವರದೆ ದ್ವಿಚಕ್ರವಾಹನದಲ್ಲಿ ಮೀನು ತಂದು ಹೋಟೆಲ್ ಎದುರುಗಡೆ ವ್ಯಾಪಾರ ಮಾಡುತ್ತಿದ್ದಾರೆ. ಹತ್ತು ಗಂಟೆಗೆ ಮೀನು ವ್ಯಾಪಾರ ಮುಗಿಸಿ ಮತ್ತೆ ಹೋಟೆಲ್ ನಲ್ಲಿ ಬರುವ ಗ್ರಾಹಕರಿಗೆ ಪಾರ್ಸೇಲ್ ಊಟಕ್ಕೆ ಸಿದ್ದ ಮಾಡುತ್ತಿದ್ದು . ದುಡಿಮೆಯಲ್ಲಿ ದೇವರನ್ನು ಕಂಡುಕೊಂಡವರಾಗಿದ್ದಾರೆ.
ವರದಿ : ಬಿ.ಎಸ್.ಆಚಾರ್ಯ