ಉಡುಪಿ : ಪರಿಸ್ಥಿತಿ ಈಗಾಗಲೇ ಕೈ ಮೀರಿದ್ದು, ಬಹಳಷ್ಟು ಸಮಸ್ಯೆಗಳಾಗುತ್ತಿವೆ. ಕೊರೋನಾ ಸೋಂಕಿನ ಲಕ್ಷಣ ಕಂಡು ಬಂದ ಕೂಡಲೇ ಟೆಸ್ಟ್ ಮಾಡಿಸಿಕೊಂಡು, ಚಿಕಿತ್ಸೆ ಪಡೆಯಿರಿ ಎಂದು ಉಡುಪಿ ಡಿಸಿ ಜಿ.ಜಗದೀಶ್ ಮನವಿ ಮಾಡಿದ್ದಾರೆ.
ನಿರ್ಲಕ್ಷ್ಯ ಬೇಡ
ಹಲವು ಬಾರಿ ಮನವಿ ಮಾಡಿದರೂ ಬಹಳಷ್ಟು ಮಂದಿ ನಿರ್ಲಕ್ಷಿಸುತ್ತಿದ್ದಾರೆ. ಸೋಂಕು ತಗುಲಿದರೂ ಮನೆಯಲ್ಲಿಯೇ ಇದ್ದು, 15 ದಿನಗಳ ನಂತರ ಸೀದಾ ಐಸಿಯು ಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಈಗಾಗಲೇ ಐಸಿಯು ಬೆಡ್ ಗಳು ಭರ್ತಿಯಾಗಿವೆ. ದಯವಿಟ್ಟು ನಿರ್ಲಕ್ಷ್ಯ ಮಾಡದೇ ಸೋಂಕಿನ ಲಕ್ಷಣ ಕಂಡು ಬಂದ ಕೂಡಲೇ ಟೆಸ್ಟ್ ಮಾಡಿಸಿ, ಐಸೋಲೇಟ್ ಆಗಿ, ಮನೆಯ ಹಿರಿಯರನ್ನು, ಉಳಿದವರನ್ನು ರಕ್ಷಿಸಿ ಎಂದಿದ್ದಾರೆ.
ಹೊರಗಿನಿಂದ ಬಂದವರನ್ನು ದೂರವಿಡಿ
ಹೊರಗಿನಿಂದ ಯಾರೇ ಬಂದರೂ, ಹತ್ತಿರದ ಸಂಬಂಧಿಕರಾದರೂ ಆದಷ್ಟು ದೂರದಲ್ಲೇ ಮಾತನಾಡಿ, ಐಸೋಲೇಟ್ ವ್ಯವಸ್ಥೆ ಮಾಡಿ. ಇಲ್ಲವಾದಲ್ಲಿ ಕೊರೋನಾ ನಿಯಂತ್ರಣ ಕಷ್ಟ.
ಮನೆಯ ಎಲ್ಲಾ ಸದಸ್ಯರಿಗೂ ಕೊರೋನಾ ಹಬ್ಬುತ್ತಿದೆ. ಇಮ್ಯೂನಿಟಿ ಪವರ್ ಇರುವವರಿಗೆ ಏನೂ ಆಗುವುದಿಲ್ಲ, ನಿಶ್ಯಕ್ತರಿಗೆ, ವಯಸ್ಸಾದವರಿಗೆ ಗಂಭೀರ ಲಕ್ಷಣ ಕಂಡು ಬರುತ್ತದೆ. ಈಗಾಗಲೇ ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿದ್ದು, ಲಕ್ಷಣಗಳಿದ್ದವರು ಪರೀಕ್ಷೆ ಮಾಡಿಸಿಕೊಂಡಲ್ಲಿ ಆಕ್ಸಿಜನ್, ಬೆಡ್ ಸಮಸ್ಯೆ ಬರುವುದಿಲ್ಲ. ದಯವಿಟ್ಟು ಸಹಕರಿಸಿ ಎಂದು ಮನವಿ ಮಾಡಿದ್ದಾರೆ.