ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ಇಲ್ಲಿ ಯಾವುದೇ ಸೇವೆ ಮಾಡುತ್ತಿಲ್ಲ. ಬದಲಾಗಿ ಸಹಾಯ ಮಾಡುತ್ತಿದ್ದಾರೆ. ಲಸಿಕಾ ಕೇಂದ್ರಕ್ಕೆ ಬರುವವರಿಗೆ ಉಚಿತ ರಿಕ್ಷಾ ವ್ಯವಸ್ಥೆ ಸೇರಿದಂತೆ ಅಚ್ಚುಕಟ್ಟಾದ ವ್ಯವಸ್ಥೆಯೊಂದಿಗೆ ಇಲ್ಲಿ ಲಸಿಕಾ ಕೇಂದ್ರದಲ್ಲಿದೆ.ಕುಂದಾಪುರ ಸರಕಾರಿ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಮಾರ್ಪಾಡು ಮಾಡಿದ ನಂತರ ಲಸಿಕಾ ಕೇಂದ್ರವನ್ನು ಕಲಾ ಮಂದಿರಕ್ಕೆ ವರ್ಗಾಯಿಸಲಾಗಿದೆ.
ಕಳೆದ ೧೫ ದಿನಗಳಿಂದ ಕಲಾ ಮಂದಿರವನ್ನು ಲಸಿಕಾ ಕೇಂದ್ರವಾಗಿ ಮಾರ್ಪಾಡು ಮಾಡಲಾಗಿದ್ದು, ವೈದ್ಯಕೀಯ ಸಿಬ್ಬಂದಿಗಳ ಜೊತೆ ಕಲಾಕ್ಷೇತ್ರದ ಸದಸ್ಯರು ಅವರಿಗೆ ಸಹಾಯ ಮಾಡುತ್ತಿದ್ದಾರೆ.
ದಾನಿಗಳ ನೆರವು
ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಸುಸಜ್ಜಿತವಾಗಿ ಲಸಿಕಾ ಕೇಂದ್ರ ಕಾರ್ಯ ನಿರ್ವಹಿಸುತ್ತಿದ್ದು, ಬೆಳಿಗ್ಗೆ ಉಪಹಾರವನ್ನು ಕೋಟೆಶ್ವರದ ಶ್ರೀರಾಮ ಸೇವಾ ಸಂಘ, ಮಧ್ಯಾಹ್ನ ಭೋಜನವನ್ನು ಜೆಸಿ ಕುಂದಾಪುರ ನಗರ ಹಾಗೂ ನೀರನ್ನು ಬಂಟ್ಸ್ ಸಂಘ ಕುಂದಾಪುರ, ರಕ್ಷಾ ಚಾರಿಟೇಬಲ್ ಟ್ರಸ್ಟ್ ಕುಂದಾಪುರ ಸೇರಿದಂತೆ ನಾನ ಸಂಘ ಸಂಸ್ಥೆಗಳು ನೀಡುತ್ತಿವೆ.
ಹೆಸರು ಹೇಳದ ದಾನಿಗಳು ಹಲವರು
ದೇಶವೇ ವಿಪತ್ತಿನಲ್ಲಿರುವಾಗ ತನ್ನ ಊರಿನ ಲಸಿಕಾ ಕೇಂದ್ರಕ್ಕೆ ಅನೇಕ ಜನರು ನಗದು ಸಹಾಯವನ್ನು ನೀಡಿದ್ದಾರೆ. ಹೆಸರನ್ನು ಹೇಳಲು ಇಚ್ಚಿಸದೇ ಅನೇಕರು ತಮ್ಮ ಕೈಯಲಾದ ಸಹಾಯ ಮಾಡಿದ್ದಾರೆ.