ಚಂದನವನ : ಚಂದನವನ ಒಂದರ ಮೇಲೊಂದು ಆಘಾತವನ್ನು ಅನುಭವಿಸುತ್ತಿದೆ. ಇತ್ತೀಚೆಗಷ್ಟೇ ಕೋಟಿ ನಿರ್ಮಾಪಕ ರಾಮು, ಶಂಖನಾದ ಅರವಿಂದ್ ಸೇರಿದಂತೆ ಹಲವರನ್ನು ಚಿತ್ರರಂಗ ಕಳೆದುಕೊಂಡಿದೆ. ಇದೀಗ ಚಂದನವನ ಕಂಡ ಶ್ರೇಷ್ಠ ಚಿತ್ರ ಸಾಹಿತಿ ಶ್ರೀರಂಗ ವಿಧಿವಶರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ನಾಗರಬಾವಿಯ ತಮ್ಮ ನಿವಾಸದಲ್ಲಿ ಅವರು ಇಹಲೋಕ ತ್ಯಜಿಸಿದ್ದಾರೆ.
ಸೂಪರ್ ಹಿಟ್ ಹಾಡುಗಳ ಸರದಾರ
ಸಾವಿರಕ್ಕೂ ಅಧಿಕ ಹಾಡುಗಳನ್ನು ಬರೆದಿರುವ ಶ್ರೀರಂಗ ಅವರು 1975 ರಲ್ಲಿ ಚಿತ್ರರಂಗ ಪ್ರವೇಶಿಸಿದರು. ಗಜಪತಿ ಗರ್ವಭಂಗ ಚಿತ್ರದ ‘ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮ’, ನಂಜುಂಡಿ ಕಲ್ಯಾಣ ಚಿತ್ರದ ‘ಒಳಗೆ ಸೇರಿದರೆ ಗುಂಡು, ಹುಡುಗಿ ಆಗುವಳು ಗಂಡು’, ಜನುಮದ ಜೋಡಿ ಚಿತ್ರದ ‘ಸೀರೆ ಸೀರೆ ಸೀರೆ ಎಲ್ಲೆಲ್ಲೂ ಹಾರೈತೆ’, ಆದಿತ್ಯ ಚಿತ್ರದ ‘ರಂಭೆ ನೀ ವಯ್ಯಾರದ ರಂಭೆ’, ಅಪ್ಪು ಚಿತ್ರದ ‘ಬಾರೆ ಬಾರೆ ಕಲ್ಯಾಣಮಂಟಪಕ್ಕೆ ಬಾ’, ಹೀಗೆ ಅವರ ಲೇಖನಿಯಲ್ಲಿ ಅದ್ಭುತ, ಇಂದಿಗೂ ಜನರ ನಾಲಗೆಯಲ್ಲಿ ನಲಿಯುವಂತಹ ಹಾಡುಗಳು ಸೃಷ್ಟಿಯಾಗಿವೆ.
ಅಪ್ಪಾಜಿ, ಆಸೆಗೊಬ್ಬ ಮೀಸೆಗೊಬ್ಬ, ಆಕಾಶ್, ರಕ್ತಕಣ್ಣೀರು, ಗಂಡುಗಲಿ ಕುಮಾರರಾಮ, ಇನ್ಸ್ಪೆಕ್ಟರ್ ವಿಕ್ರಮ್ ಸೇರಿದಂತೆ ಅನೇಕ ಚಿತ್ರಗಳಲ್ಲಿ ಶ್ರೀರಂಗ ಅವರು ಬರೆದಿರುವ ಹಾಡುಗಳು ಜನಪ್ರಿಯವಾಗಿವೆ. ಭೂಲೋಕದಲ್ಲಿ ಯಮರಾಜ ಚಿತ್ರಕ್ಕೆ ಕಥೆ, ಸಂಭಾಷಣೆ ಬರೆದಿದ್ದು, ಬಂಗಿ ರಂಗ ಎಂದೇ ಕರೆಯಲ್ಪಡುತ್ತಿದ್ದರು.
ಸಂಕಷ್ಟದಲ್ಲಿದ್ದ, ಸ್ವಾಭಿಮಾನಿ ಶ್ರೀರಂಗ
ಚಂದನವನದಲ್ಲಿ ಇಂದಿಗೂ ಗುನುಗುವ ಹಾಡುಗಳನ್ನು ನೀಡಿರುವ ಖ್ಯಾತ ನಾಮ ಶ್ರೀರಂಗದು. ಆದರೆ, ಅವರ ಸ್ಥಿತಿ ಕಷ್ಟದಲ್ಲಿತ್ತು. ಅದಕ್ಕೆ ಸಾಕ್ಷಿ ಸಂಚಾರಿ ವಿಜಯ್. ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿ, ಅವರ ಮನೆಗೂ ಹೋಗಿ ಸಂಕಷ್ಟವನ್ನು ಕಣ್ಣಾರೆ ಕಂಡವರು. ಸ್ವಾಭಿಮಾನಿಯಾಗಿದ್ದ ಶ್ರೀರಂಗ ಅವರ ಬಗೆಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದ ಸಂಚಾರಿ ವಿಜಯ್, ಶ್ರೀರಂಗ ಅವರಿಗೆ ನೆರವಾಗೋಣ ಬನ್ನಿ ಎಂದಿದ್ದರು. ಆದರೆ, ಈಗ ಚಂದನವನ ಮಹಾನ್ ಗೀತ ಸಾಹಿತಿಯನ್ನು ಕಳೆದುಕೊಂಡು ಕಂಬನಿ ಮಿಡಿಯುತ್ತಿದೆ.