ಕಾರವಾರ: ಕೊರೊನಾ ತಡೆಗಟ್ಟಲು ರಾಜ್ಯ ಸರಕಾರ ಇಂದಿನಿಂದ ಸೆಮಿ ಲಾಕ್ಡೌನ್ ಜಾರಿ ಮಾಡಿದೆ. ಈ ಕಾರಣದಿಂದ ಅನಗತ್ಯವಾಗಿ ಜನರು ರಸ್ತೆಯಲ್ಲಿ ಓಡಾಡದಂತೆ ತಡೆಯಲು ಬೆಳಗ್ಗೆಯಿಂದಲೇ ಪೊಲೀಸರು ಲಾಠಿ ಹಿಡಿದು ರಸ್ತೆಗಿಳಿದಿದ್ದಾರೆ. ಆದರೆ, ಪೊಲೀಸರ ಕಷ್ಟ ಅರಿತ ಇಲ್ಲೋರ್ವ ವಿಕಲಚೇತನ ವ್ಯಕ್ತಿ ಅವರಿಗೆ ಆಹಾರ ಸರಬರಾಜು ಮಾಡುವ ಮೂಲಕ ಮಾದರಿ ಸೇವೆ ಸಲ್ಲಿಸುತ್ತಿದ್ದಾರೆ. ಜನತಾ ಕರ್ಫ್ಯೂ ಪ್ರಾರಂಭವಾಗಿದ್ದಿನಿಂದ ಕಾರವಾರದ ನಿವಾಸಿಯಾಗಿರುವ ಜಗದೀಶ್,
ಫ್ರಂಟ್ ಲೈನ್ ವಾರಿಯರ್ಸ್ ಪೊಲೀಸರಿಗೆ ನೀರು, ಜ್ಯೂಸ್, ಬಿಸ್ಕತ್ತು ನೀಡುವ ಮೂಲಕ ತನ್ನ ಸೇವೆ ಸಲ್ಲಿಸುತ್ತಿದ್ದು, ಈಗಲೂ ಮುಂದುವರಿಸಿಕೊಂಡು ಸಾಗಿದ್ದಾರೆ.
ಆಕ್ಸಿಡೆಂಟ್ ನಲ್ಲಿ ಕೈ ಕಳಕೊಂಡಿರುವ ಜಗದೀಶ್
ಈ ಹಿಂದೆ ಆಕ್ಸಿಡೆಂಟ್ನಲ್ಲಿ ಜಗದೀಶ್ ತನ್ನ ಒಂದು ಕೈ ಕಳೆದುಕೊಂಡಿದ್ದರು. ಅದಾಗ್ಯೂ, ಒಂದೇ ಕೈಯಲ್ಲಿ ಎಂ-80 ಚಲಾಯಿಸುತ್ತಾ ನಗರವಿಡೀ ಸುತ್ತಾಡಿ ಬಿಸಿಲಿನಲ್ಲಿ ಇಡೀ ದಿನ ನಿಂತು ಬಸವಳಿಯೋ ಪೊಲೀಸರ ಹೊಟ್ಟೆ ತಣ್ಣಗಿರಿಸುವ ಕೆಲಸ ನಡೆಸುತ್ತಿದ್ದಾರೆ ಜಗದೀಶ್. ಹೋಟೆಲ್ನಲ್ಲಿ ಕೆಲಸ ಮಾಡುತ್ತಿರುವ ಅವರು ಕಳೆದ ಲಾಕ್ಡೌನ್ ಸಂದರ್ಭದಲ್ಲೂ ಪೊಲೀಸರು ಹಾಗೂ ಹಸಿದವರಿಗೆ ಆಹಾರ ನೀಡಿ ತನ್ನ ಸೇವೆ ಸಲ್ಲಿಸಿದ್ರು.
ಈ ಬಾರಿ ಮತ್ತೆ ಸೆಮಿ ಲಾಕ್ಡೌನ್ ಸಂದರ್ಭ ನೀರು, ಜ್ಯೂಸ್, ಬಿಸ್ಕತ್ತು ನೀಡ್ತಿದ್ದು, ಪೊಲೀಸರಿಗಂತೂ ಖುಷಿಯಾಗಿದೆ.