ಚಂದನವನ: ಹಲವು ಕಲಾವಿದರನ್ನು ಈಗಾಗಲೇ ಚಂದನವನ ಕಳೆದುಕೊಂಡಿದ್ದಾರೆ. ಆ ದುಃಖ ಮಾಸುವ ಮುನ್ನವೇ, ಖ್ಯಾತ ರಂಗಭೂಮಿ ಕಲಾವಿದ, ನಟ ಆರ್.ಎಸ್.ರಾಜಾರಾಮ್ ವಿಧಿವಶರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. 1938 ರ ಜುಲೈ 10 ರಂದು ಕೋಲಾರ ಜಿಲ್ಲೆಯ ಕೆ.ಜಿ.ಎಫ್ ನಲ್ಲಿ ರಾಜಾರಾಮ್ ಜನಿಸಿದರು. ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಅಧೀನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.
ರಂಗಭೂಮಿಯಲ್ಲಿ ಅತೀವ ಆಸಕ್ತಿ
ರಂಗಭೂಮಿಯಲ್ಲಿ ಬಹಳ ಆಸಕ್ತಿ ಹೊಂದಿದ್ದ ಅವರು ತಮ್ಮ ಮಲ್ಲೇಶ್ವರದ ಸ್ನೆಹಿತರೊಡನೆ ‘ರಸಿಕ ರಂಜನಿ ಕಲಾವಿದರು’ ತಂಡ ಸ್ಥಾಪಿಸಿದ್ದರು. ಕೈಲಾಸಂ, ಕೆ.ಗುಂಡಣ್ಣ, ಪರ್ವತವಾಣಿ ಮೊದಲಾದವರ ನಾಟಕಗಳಲ್ಲಿ ಅಭಿನಯಿಸಿದ್ದರು. 1964 ರಲ್ಲಿ ಸಚಿವಾಲಯದ ಉದ್ಯೋಗಿಗಳೊಡನೆ ಸಚಿವಾಲಯ ಸಾಂಸ್ಕೃತಿಕ ಸಂಘ ಸ್ಥಾಪಿಸಿದರು. 1972 ರಿಂದ ‘ನಟರಂಗ’ ಮತ್ತು 1983 ರಿಂದ ‘ವೇದಿಕೆ’ ಯ ರಂಗ ಚಟುವಟಿಕೆಗಳಲ್ಲಿ ತೊಡಗಿದ್ದರು. ಸಿ.ಆರ್.ಸಿಂಹ, ಎಂ.ಎಸ್.ಸತ್ಯು, ಜಯತೀರ್ಥ ಜೋಶಿ ಮೊದಲಾದವರ ನಿರ್ದೇಶನದ ಹಲವು ನಾಟಕಗಳಲ್ಲಿ ನಟಿಸಿ ಪ್ರಸಿದ್ಧರಾಗಿದರು.
ಚಂದನವನದಲ್ಲೂ ನಟನಾ ಕೌಶಲ್ಯ ಮೆರೆದ ಕಲಾವಿದ
ಹಲವು ಚಲನಚಿತ್ರಗಳಲ್ಲಿ, ಧಾರಾವಾಹಿಗಳಲ್ಲಿ ರಾಜಾರಾಮ್ ನಟಿಸಿದ್ದಾರೆ. ಗಾಳಿಪಟ, ಗಾನ ಬಜಾನಾ, ಎ, ನಮ್ಮೂರ್ ಹುಡ್ಗ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ರಾಜಾರಾಮ್ ಅವರಿಗೆ ಕೊರೊನಾ ಸೋಂಕು ತಗುಲಿತ್ತು ಎನ್ನಲಾಗಿದೆ.