ಬೈಂದೂರು: ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ತಾರಾಪತಿ, ಅಳ್ವೆಕೋಡಿ, ಬೆಸ್ಕೂರು, ಸುಬ್ಬರಾಡಿ ಭಾಗದ ಗ್ರಾಮಸ್ಥರಿಗೆ ಮಳೆಗಾಲ ಆರಂಭದ ವರೆಗೆ ಉಚಿತ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಪ್ರಾರಂಭಿಸಲಾಯಿತು.
ಬೈಂದೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನವೀನ್ ಈ ಯೋಜನೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಬೇಸಿಗೆಯಲ್ಲಿ ಬೆಸ್ಕೂರಿನಿಂದ ತಾರಾಪತಿಯ ತನಕ ಕುಡಿಯುವ ನೀರಿಗೆ ಹೆಚ್ಚು ಅವಶ್ಯವಿದೆ.
ಸ್ವ ಇಚ್ಚೆಯಿಂದ ಪಂಚಾಯತ್ ಮಾಡಬೇಕಾದ ಕಾರ್ಯ ವನ್ನು ಇವರು ಟ್ರಸ್ಟ್ ಮೂಲಕ ಮಾಡುತ್ತಿರುದು ನಿಜಕ್ಕೂ ಪ್ರಶಂಸನೀಯ ಕಾರ್ಯವಾಗಿದೆ ಎಂದರು.
ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ನ ಮ್ಯಾನೆಜಿಂಗ್ ಟ್ರಸ್ಟಿ ಗೋವಿಂದ ಬಾಬು ಪೂಜಾರಿ ಮಾತನಾಡಿ, ಕಳೆದ ಭಾರಿ ಬಿಜೂರು ಗ್ರಾಮದಲ್ಲಿ ಕುಡಿಯುವ ನೀರಿಗೆ ತೊಂದರೆ ಉಂಟಾದಾಗ ಟ್ರಸ್ಟ್ ವತಿಯಿಂದ ಉಚಿತವಾಗಿ ನೀರು ಸರಬರಾಜು ಮಾಡಲಾಗಿತ್ತು. ಈ ಬಾರಿ ಬೇಸಿಗೆಯಲ್ಲಿ ಮಳೆಯಾಗಿದ್ದರಿಂದ ಅತಿ ಅಗತ್ಯ ಇರುವಲ್ಲಿ ಮಾತ್ರ ನೀರು ಸರಬರಾಜು ಮಾಡಲಾಗುತ್ತಿದೆ. ಅಳ್ವೆಕೋಡಿ, ತಾರಾಪತಿ, ಬೆಸ್ಕೂರು ಭಾಗಕ್ಕೆ ಹೆಚ್ಚಿನ ಅಗತ್ಯ ಕಂಡುಬಂದ ಹಿನ್ನೆಲೆಯಲ್ಲಿ, ಗ್ರಾಮಸ್ಥರ ಮನವಿಯ ಮೇರೆಗೆ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು.
ಉದ್ಯಮಿ ಗುರುರಾಜ ಪಂಜು ಪೂಜಾರಿ, ಶ್ರೀ ವರಲಕ್ಷ್ಮೀ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಪೂಜಾರಿ, ಶ್ರೀ ರಾಮ ಭಜನಾ ಮಂದಿರದ ಗೌರವಾಧ್ಯಕ್ಷ ಮಾಧವ ಖಾರ್ವಿ, ಅಧ್ಯಕ್ಷರಾದ ರವೀಂದ್ರ ಖಾರ್ವಿ, ಸ್ಥಳೀಯರಾದ ಸುರೇಶ್ ದೇವಾಡಿಗ, ನಾಗೇಶ್ ಖಾರ್ವಿ, ವೀರಭದ್ರ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.
ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ತಾರಾಪತಿ, ಅಳ್ವೆಕೋಡಿ, ಬೆಸ್ಕೂರು, ಸುಬ್ಬರಾಡಿ ಭಾಗದ ಸುಮಾರು 350 ಮನೆಗಳಿಗೆ ಪ್ರತಿನಿತ್ಯ ಎರಡು ಪ್ರತ್ಯೇಕ ವಾಹನಗಳಲ್ಲಿ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ.