ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ತೌಕ್ತೇ ಚಂಡ ಮಾರುತದ ಕಾರಣದಿಂದಾಗಿ ಅರಬ್ಬಿ ಕಡಲಿನಲ್ಲಿ ಉಂಟಾಗಿರುವ ಪ್ರಕ್ಷುಬ್ದ ಪರಿಸ್ಥಿತಿಯಿಂದಾಗಿ ಭಾರಿ ಗಾತ್ರದಲ್ಲಿ ಕಡಲ ತೀರಕ್ಕೆ ಅಪ್ಪಳಿಸುತ್ತಿರುವ ಸಮುದ್ರದ ಅಲೆಗಳಿಂದಾಗಿ
ಕೋಡಿಯ ಕಿನಾರ ಬೀಚ್ ನಿಂದ ಕುಂಭಾಶಿಯ ಕೊಮೆಯವರೆಗೂ ಸಮುದ್ರ ತೀರದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ.
ಕಡಲ್ಕೊರೆತ
ಸಮುದ್ರದಲ್ಲಿ ಎದ್ದಿರುವ ಗಜ ಗಾತ್ರದ ಅಲೆಗಳು ತೀರಕ್ಕೆ ರಭಸವಾಗಿ ಅಪ್ಪಳಿಸುತ್ತಿರುವುದರಿಂದಾಗಿ ಕಡಲ್ಕೊರೆತಕ್ಕಾಗಿ ತೀರ ಪ್ರದೇಶದಲ್ಲಿ ಹಾಕಲಾಗಿದ್ದ ತಡೆಗೋಡೆಗಳು ಸಡಿಲವಾಗಿ ಕಲ್ಲುಗಳು ಸಮುದ್ರ ಗರ್ಭದತ್ತ ಸಾಗುತ್ತಿದೆ. ಸಮುದ್ರ ತೀರಕ್ಕೆ ಹೊಂದಿಕೊಂಡಿರುವ ರಸ್ತೆಯ ಮೇಲೆ ಹರಿದು ಬರುತ್ತಿರುವ ಉಪ್ಪು ನೀರು, ಕೃಷಿ ತೋಟ ಹಾಗೂ ಮನೆಯಂಗಳಕ್ಕೆ ಬರುತ್ತದೆ ಎನ್ನುವ ಆತಂಕಗಳು ಇದೆ. ಬೀಜಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಾತ್ರಬೆಟ್ಟು ಎಂಬಲ್ಲಿ ಸಮುದ್ರ ನೀರು ಕೃಷಿ ಗದ್ದೆಗಳಿಗೆ ನುಗ್ಗಿ ಬೆಳೆಗಳಿಗೆ ಹಾನಿಯನ್ನುಂಟು ಮಾಡಿದೆ.
ಎಸಿ ಭೇಟಿ, ಪರಿಶೀಲನೆ
ಸಮುದ್ರ ತೀರ ಪ್ರದೇಶದಲ್ಲಿ ಚಂಡ ಮಾರುತದಿಂದ ಉಂಟಾಗಿರುವ ಪ್ರಕ್ಷುಬ್ದ ಪರಿಸ್ಥಿತಿಯ ಅವಲೋಕ ನಡೆಸಲು ಕುಂದಾಪುರ ಉಪ ವಿಭಾಗಾಧಿಕಾರಿ ಕೆ.ರಾಜು, ಕೋಟೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣ ಗೊಲ್ಲ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸ್ಥಳೀಯರಿಗೆ ಧೈರ್ಯ ತುಂಬಿದ್ದಾರೆ. ತೀರ ಪ್ರದೇಶದ ಜನರು ಸಮುದ್ರಕ್ಕೆ ತೆರಳದಂತೆ ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಲಾಗಿದೆ. ಇದೇ ರೀತಿ ಗಾಳಿ ಹಾಗೂ ಮಳೆಯ ಆರ್ಭಟ ಹೆಚ್ಚಾದಲ್ಲಿ ಸಮುದ್ರ ಕಿನಾರೆಯಲ್ಲಿ ನೀರು ಜನ ವಸತಿ ಪ್ರದೇಶದತ್ತ ಹರಿದು ಬರುವ ಸಾಧ್ಯತೆ ಇದೆ. ತೆರೆಯ ಅಬ್ಬರದಿಂದಾಗಿ ತೀರದಲ್ಲಿ ನಿಲ್ಲಿಸಿರುವ ದೋಣಿಗಳಿಗೂ ಅಪಾಯವಾಗುವ ಸಾಧ್ಯತೆಗಳಿವೆ.
ಸಮುದ್ರ ತಡೆಗೋಡೆಗಳ ನಿರ್ಮಾಣಕ್ಕೆ ಹಾಕಲಾದ ಕಲ್ಲುಗಳು ಜಾರಿ ಹೋಗಿರುವ ಹಾಗೂ ಕೊಚ್ಚಿಕೊಂಡು ಹೋಗಿರುವ ಪ್ರದೇಶಗಳಲ್ಲಿ ಕಲ್ಲುಗಳನ್ನು ಹಾಕುವ ಕೆಲಸ ಮಾಡಲಾಗುತ್ತಿದೆ.