ಮಂಗಳೂರು : ತೌಕ್ತೆ ಚಂಡಮಾರುತದ ಅಬ್ಬರ ಕರಾವಳಿಯಲ್ಲಿ ಜೋರಾಗಿದೆ. ಕಡಲು ಪ್ರಕ್ಷುಬ್ಧಗೊಂಡಿದೆ. ಈ ವೇಳೆ ಎಂ.ಆರ್.ಪಿ.ಎಲ್ ಗೆ ತೈಲ ಹೊತ್ತು ತರುವ ಹಡಗುಗಳಿಗೆ ಆಳ ಸಮುದ್ರದಲ್ಲಿ ಪೈಪ್ ಜೋಡಿಸುವ ಕೆಲಸದಲ್ಲಿ ನಿರತರಾಗಿದ್ದ ಎರಡು ಬೋಟ್ ಗಳು ಚಂಡಮಾರುತಕ್ಕೆ ಸಿಲುಕಿದ್ದು, 17 ಮಂದಿ ಸಂಕಷ್ಟಕ್ಕೀಡಾಗಿದ್ದರು. ಭಾರತೀಯ ಕೋಸ್ಟ್ ಗಾರ್ಡ್ ಕಾರ್ಯಾಚರಣೆ ನಡೆಸಿ 9 ಮಂದಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ತೈಲ ಶುದ್ಧೀಕರಣ ಘಟಕದ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬೋಟ್ ಇದಾಗಿದ್ದು, ಒಂದು ಬೋಟ್ ನಲ್ಲಿ 8 ಮಂದಿ, ಮತ್ತೊಂದರಲ್ಲಿ 9 ಮಂದಿ ಇದ್ದರು. 8 ಮಂದಿ ಇದ್ದ ಅಲಾಯನ್ಸ್ ಎಂಬ ವಿಗ್ ಬೋಟ್ ಗಾಳಿಗೆ ಮಗುಚಿದೆ, 5 ಮಂದಿ ನಾಪತ್ತೆಯಾಗಿದ್ದಾರೆ.
ಈಜಿ ದಡ ಸೇರಿದ ಮೂವರು
ದೋಣಿ ಮಗುಚುತ್ತಿದ್ದಂತೆ ಮೊಮಿರುಲ್ಲಾ ಮುಲ್ಲಾ(34), ಕರೀಮುಲ್ಲಾ ಶೇಖ್(24) ಟ್ಯೂಬ್ ನಲ್ಲಿ ಈಜಿ ಜೀವ ಉಳಿಸಿಕೊಂಡು ಉಡುಪಿಯ ಮಟ್ಟು ಬೀಚ್ ಬಳಿ ಪತ್ತೆಯಾಗಿದ್ದಾರೆ. ಹರ್ಯಾಣ ಮೂಲದ ನಸೀಮ್(35) ಎಂಬವರು ಜೀವ ಉಳಿಸಿಕೊಳ್ಳಲು ಹರಸಾಹಸ ಪಟ್ಟಿದ್ದಾರೆ. ಟ್ಯೂಬ್ ಹಿಡಿದು ಮನೆಯೊಂದರ ವಿದ್ಯುತ್ ದೀಪ ನೋಡಿ ದಡ ಸೇರಿದ್ದಾರೆ.
ಹೇಮಚಂದ್ರ ಎಂಬವರ ಮೃತದೇಹ ಉಡುಪಿಯ ಪಡುಬಿದ್ರೆಯಲ್ಲಿ ಪತ್ತೆಯಾಗಿದೆ.